Breaking News
Home / Breaking News / ರೈತರೇನು ಡಕಾಯಿತರೇ. ಸರ್ಕಾರದ ವಿರುದ್ಧ ಪಿ ರಾಜೀವ ಗರಂ

ರೈತರೇನು ಡಕಾಯಿತರೇ. ಸರ್ಕಾರದ ವಿರುದ್ಧ ಪಿ ರಾಜೀವ ಗರಂ

 ಬೆಳಗಾವಿ – ಮಹದಾಯಿ ಮತ್ತು ಕಾವೇರಿ ಗಲಾಟೆಯಲ್ಲಿ ರೈತರ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಅಮಾಯಕ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಕುಡಚಿ ಶಾಸಕ ಪಿ. ರಾಜೀವ ಒತ್ತಾಯಿಸಿದರು.

ಮಂಗಳವಾರ ಸುವರ್ಣ ಸೌಧದಲ್ಲಿ ನಡೆದ ಬರಗಾಲದ ಚರ್ಚೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಕುಡುಚಿ ಶಾಸಕ ಮಾತನಾಡಿದರು. ನವಲಗುಂದ ತಾಲೂಕಿನ ಯಮನೂರಿನಲ್ಲಿ ರೈತರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಹಾಗೂ ಐಪಿಸಿ 436, 307, 353, 308, 309 ಸೆಕ್ಷನ್ಗಳ ಜತೆ ಜೀವಾವಧಿ ಶಿಕ್ಷೆಯಾಗುವಂತಹ ಡಕಾಯಿತಿ ಆರೋಪದ ಸೆಕ್ಷನ್ 397ನ್ನೂ ಹಾಕಲಾಗಿದೆ. ರೈತರೇನು ಡಕಾಯಿತರೇ. ಮೊದಲು ಸೆಕ್ಷನ್ ಹಿಂಪಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜೀವ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ. ಪರಮೇಶ್ವರ್ ಮಹದಾಯಿ ನದಿ ನೀರಿನ ಚಳವಳಿಯಲ್ಲಿ ಒಟ್ಟು 82 ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿಧಾರವಾಡದಲ್ಲಿ 6, ಧಾರವಾಡದಲ್ಲಿ 51, ಬೆಳಗಾವಿಯಲ್ಲಿ 5, ದಾವಣಗೆರೆಯಲ್ಲಿ 6, ಗದಗದಲ್ಲಿ 13, ಬಾಗಲಕೋಟೆಯಲ್ಲಿ ಒಂದು ಪ್ರಕರಣ. ಕಾವೇರಿ ನದಿ ನೀರಿನ ಚಳವಳಿಯಲ್ಲಿ 44 ಪ್ರಕರಣಗಳು ದಾಖಲಾಗಿದ್ದು, ರಾಮನಗರ, ಕೋಲಾರ, ಚಾಮರಾಜನಗರದಲ್ಲಿ ತಲಾ ಒಂದೊಂದು, ಮೈಸೂರಿನಲ್ಲಿ 2, ಮಂಡ್ಯ ಜಿಲ್ಲೆಯಲ್ಲಿ 39 ಪ್ರಕರಣಗಳು ದಾಖಲಾಗಿವೆ. ಅಮಾಯಕರ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿದೆ. ಬಾಗಲಕೋಟೆಯ ಒಂದು ಪ್ರಕರಣ ಹೊರತು ಪಡಿಸಿ ಉಳಿದ ಎಲ್ಲಾ ಪ್ರಕರಣಗಳಲ್ಲೂ ಚಾರ್ಜ್ಸೀಟ್ ಸಲ್ಲಿಕೆಯಾಗಿದೆ.

ಯಾವ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ವರದಿ ನೀಡಲು ಹಿರಿಯ ಅಧಿಕಾರಿಗಳಾದ ಕಮಲ್ಪಂಥ್ ಮತ್ತು ರಾಘವೇಂದ್ರ ಔರಾದ್ಕರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ನೀಡಿದೆ. ಅದನ್ನು ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ನಂತರ ಸಂಪುಟದ ಮುಂದೆ ಮಂಡಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಪರಮೇಶ್ವರ್ ಹೇಳಿದರು

ಶಾಂತಿಯುತ ಚಳವಳಿಗೆ ಸರ್ಕಾರ ನಿರ್ಬಂಧ ವಿಧಿಸಿರಲಿಲ್ಲ. ಆದರೆ ಚಳವಳಿ ಹೆಸರಿನಲ್ಲಿ 12 ಕಚೇರಿಗಳನ್ನು ಸುಟ್ಟು ಹಾಕಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇಂತಹ ಅಹಿತಕರ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ಮಾಡಿದವರು ರೈತರಲ್ಲ. ಉದ್ದೇಶಪೂರ್ವಕವಾಗಿ ಕೃತ್ಯಗಳನ್ನು ಮಾಡಿದ್ದು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಮಾಯಕ ರೈತರನ್ನು ಬಿಡುಗಡೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುಲಾಗುತ್ತಿದೆ ಎಂದರು.

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *