ಅತಿಕ್ರಮಣ ತೆರವು, ತಡೆಗೋಡೆ ನಿರ್ಮಾಣಕ್ಕೆ ಸೂಚನೆ

ಬೆಳಗಾವಿ- ಕಳೆದ ಮಳೆಗಾಲದಲ್ಲಿ ಪ್ರವಾಹದಿಂದ ನಗರ ಪ್ರದೇಶದಲ್ಲಿ ತೀವ್ರ ಹಾನಿಯುಂಟು ಮಾಡಿದ್ದ ಬಳ್ಳಾರಿ ನಾಲಾ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ *ರಮೇಶ್ ಜಾರಕಿಹೊಳಿ* ಸೋಮವಾರ ಪರಿಶೀಲಿಸಿದರು.

ನಗರದ ಪ್ರಮುಖ ನಾಲಾ ಆಗಿರುವ ಬಳ್ಳಾರಿ ನಾಲಾ, ಲೇಂಡಿ ನಾಲಾ ಹಾಗೂ ನಾಗಝರಿ ನಾಲಾಗಳ ಎರಡೂ ಬದಿಗೆ ಬೆಳೆದಿರುವ ಕಸವನ್ನು ತಕ್ಷಣವೇ ಸ್ವಚ್ಛಗೊಳಿಸಬೇಕು ಮತ್ತು ನಗರದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಎರಡೂ ಬದಿಗೆ ತಡೆಗೋಡೆ ನಿರ್ಮಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಾಲಾ ಸುತ್ತಲೂ ಬೆಳೆದು ನಿಂತಿರುವ ಕಸ, ಅತಿಕ್ರಮಣ ಹಾಗೂ ಸೂಕ್ತ ತಡೆಗೋಡೆ ನಿರ್ಮಿಸದಿರುವುದರಿಂದ ಮಳೆಗಾಲದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಆದ್ದರಿಂದ ಅತಿಕ್ರಮಣ ತೆರವು ಮತ್ತು ನಾಲಾಗಳ ಸ್ವಚ್ಚತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಒತ್ತಾಯಿಸಿದರು.

ನಾಲಾಗಳ ಎರಡೂ ಬದಿಗೆ ಭದ್ರವಾದ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವುದರ ಜತೆಗೆ ಕಸ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸಬೇಕಿದೆ. ನಗರದಲ್ಲಿ ಬಳ್ಳಾರಿ ನಾಲಾಗೆ ಈಗಿರುವ ತಾತ್ಕಾಲಿಕ ತಡೆಗೋಡೆ ಗಟ್ಟಿಯಾಗಿಲ್ಲ. ಆದ್ದರಿಂದ ಮರುನಿರ್ಮಾಣ ಅಗತ್ಯವಿದೆ ಎಂದು ಶಾಸಕ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಅವರು, ಮಳೆಗಾಲ ಆರಂಭಗೊಂಡಿರುವುದರಿಂದ ತಕ್ಷಣವೇ ನಾಲಾ ಸ್ವಚ್ಛಗೊಳಿಸುವ ಬಗ್ಗೆ ವಿವರಿಸಿದರು.
ಇದಲ್ಲದೇ ಬ್ರಿಟಿಷ್ ಕಾಲದಲ್ಲಿ ನಿರ್ಮಾಣ ಮಾಡಲಾದ ಕಿರುಸೇತುವೆಗಳನ್ನು ಸಚಿವರಿಗೆ ತೋರಿಸಿದ ಅವರು, ಇದೇ ಮಾದರಿಯಲ್ಲಿ ನಗರದ ವಿವಿಧ ಕಡೆಗಳಲ್ಲಿ ಸೇತುವೆ ನಿರ್ಮಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

*ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಲಹೆ:*

ಬಳ್ಳಾರಿ ನಾಲಾ ಪರಿಶೀಲನೆ ಕೈಗೊಂಡ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು, ಗುಜರಾತ್ ರಾಜ್ಯದ ಕೆಲವು ಕಡೆಗಳಲ್ಲಿ ನಾಲಾಗಳ ಮೇಲೆ ಹಾಗೂ ಅಕ್ಕಪಕ್ಕದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಬಳ್ಳಾರಿ ನಾಲಾ ಇಕ್ಕೆಲಗಳಲ್ಲೂ ಸೋಲಾರ್ ಪ್ಯಾನಲ್ ಅಳವಡಿಸುವ ಬಗ್ಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಬಳ್ಳಾರಿ ನಾಲಾ ಪರಿಶೀಲನೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ *ರಮೇಶ್ ಜಾರಕಿಹೊಳಿ* ಅವರಿಗೆ ಸ್ಥಳೀಯ ಮಹಿಳೆಯರು ಶಾಲು ಹೊದಿಸಿ, ಆರತಿ ಬೆಳಗಿ ಗೌರವಿಸಿದರು.

ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್.ಅವರು ಬಳ್ಳಾರಿ ನಾಲಾ ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಮಾಹಿತಿಯನ್ನು ನೀಡಿದರು.

ಮಳೆಗಾಲದಲ್ಲಿ ತೀವ್ರ ಹಾನಿಯುಂಟು ಮಾಡುತ್ತಿರುವ ಬಳ್ಳಾರಿ ನಾಲಾ ಸ್ವಚ್ಛಗೊಳಿಸುವುದರ ಜತೆಗೆ ಭವಿಷ್ಯದಲ್ಲಿ ಕೂಡ ನಗರದ ಜನರಿಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಾಣ ಮಾಡಲಾಗುವುದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಈ ಬಗ್ಗೆ ಮತ್ತೊಮ್ಮೆ ಸಭೆ ಕರೆದು ಕಾಮಗಾರಿಯ ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದು ಸಚಿವರಿಗೆ ತಿಳಿಸಿದರು.
ಪೊಲಿಸ್ ಆಯುಕ್ತರಾದ ಬಿ‌.ಎಸ್.ಲೋಕೇಶ್ ಕುಮಾರ್, ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *