ಬೆಳಗಾವಿ
ಮಹಾರಾಷ್ಟ್ರ ಮಾದರಿಯಲ್ಲಿ ನೇಕಾರ ಸಮಾಜ ಸೇರಿದಂತೆ ಆರು ಸಮುದಾಯದವರ ಜಾಗೃತಿ ಮೂಡಿಸಲು ನ.26ರಂದು ಬೆಳಗಾವಿಯಲ್ಲಿ ಯುವಜನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗಜಾನನ ಗುಂಜೇರಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಂಶ ಪಾರಂಪರಿಕ ನೂರಾರು ವರ್ಷಗಳಿಂದ ನೇಕಾರಿಕೆ ವೃತ್ತಿಯಲ್ಲಿ ತಮ್ಮ ಬದುಕನ್ನು ನಡೆಸುತ್ತಿರುವ ಕರ್ನಾಟಕ ನೇಕಾರ ಸಮುದಾಯಗಳಾದ ದೇವಾಂಗ,ಕುರುವಿನ ಶೆಟ್ಟಿ, ಸ್ವಕುಳ ಸಾಳಿ, ಪದ್ಮಸಾಲಿ ಸೇರಿದಂತೆ ಆರು ಜಾತಿಗಳಿಗೆ ಮಹಾರಾಷ್ಟ್ರ ಮಾದರಿಯಲ್ಲಿ ವಿಶೇಷ ಶೈಕ್ಷಣಿಕ ಮತ್ತು ಅರ್ಥಿಕ ಮೀಸಲಾತಿ ಪಡೆದುಕೊಳ್ಳುವುದು, ಮಹಾರಾಷ್ಟ್ರ ಮಾದರಿಯಲ್ಲಿ ನೇಕಾರ ಸಮುದಾಯಗಳ ಮಹಾಮಂಡಳ ರಚನೆ ಮಾಡುವ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಕೆಲವು ಜಿಲ್ಲೆಗಳಲ್ಲಿ ಸಂಬಂಧ ಪಟ್ಟ ಇಲಾಖೆಗಳು ನೇಕಾರ ಸಮುದಾಯಗಳಲ್ಲಿ ಬರುವ ಕುರುವಿನ ಶೆಟ್ಟಿ ಸಮುದಾಯಕ್ಕೆ 2ಎ ವರ್ಗ ಜಾತಿ ಪ್ರಮಾಣ ಪತ್ರ ನೀಡಲು ವಿಫಲವಾಗಿದೆ. ಇದರಿಂದ ನೂರಾರು ಕುಟುಂಬಗಳು ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿದೆ. ಈ ಬಗ್ಗೆ ಸರಕಾರ ಗಮನ ಸೆಳೆದು ಸಮಸ್ಯೆಯ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ನೇಕಾರಿಕೆ ಉದ್ಯಮೆ ಉಳಿಯಬೇಕಾದರೆ ಕೇಂದ್ರ ಮತ್ತು ರಾಜ್ಯ ಸರಕಾರ ತಕ್ಷಣ ನೇಕಾರ ಸಮುದಾಯದ ಹಿತ ಕಾಯಲು ಮುಂದಾಗಬೇಕು. ನೇಕಾರ ಕುಟುಂಬಗಳ ಶ್ರೇಯೊಭಿವೃದ್ದಿಗೆ ಸಮಗ್ರ ಯೋಜನೆ ರೂಪಿಸಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದರು.
ಸರಕಾರದ ವಿವಿಧ ಇಲಾಖೆಗಳಿಗೆ ಬೇಕಾಗುವ ಸಿದ್ದ ಉಡುಪು, ಬಟ್ಟೆ, ಸೀರೆಗಳನ್ನು ರಾಜ್ಯದ ನೇಕಾರರಿಂದ ಉತ್ಪಾದಿಸಿ ಖರೀದಿಸುವ ಯೋಜನೆಗಳನ್ನು ರೂಪಿಸಬೇಕು ಹಾಗೂ ಎಲ್ಲ ಇಲಾಖೆಗಳ ಜತೆ ಒಪ್ಪಂದ ಮಾಡಿಕೊಂಡು ಕಾಲಕಾಲಕ್ಕೆ ದರ ಪರಿಷ್ಕರಣೆ ಮಾಡಿ ಖರೀದಿಸುವ ಮಾರುಕಟ್ಟೆ ವ್ಯವಸ್ಥೆ ನಿರಂತರ ಚಾಲನೆಯಲ್ಲಿರಬೇಕು ಎಂದು ಹೇಳಿದರು.
ಕರ್ನಾಟಕ ಜವಳಿ ವಲಯದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಕಚ್ಚಾ ವಸ್ತುವಿನಿಂದ ಸೀರೆ ಸಿದ್ದ ಉಡುಪಿನ ಬಟ್ಟೆಯವರೆಗೆ ಸಾವಿರಾರು ಕೋಟಿಗಳಷ್ಟು ಸರಕು ಸೇವಾ ತೆರಿಗೆ ಸಂಗ್ರಹಿಸಿದ ತೆರಿಗೆಯಲ್ಲಿ ಶೆ.10ರಷ್ಟು ಹಣವನ್ನು ನೇಕಾರಿಕೆ ವೃತ್ತಿಗೆ ಸರಕಾರ ಅನುದಾನದಲ್ಲಿ ಮೀಸಲಿಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಡಾ.ಸುಕ್ರತ ಬಂಡಾರಿ, ರಾಮಕೃಷ್ಣ ಕಾಂಬಳೆ, ನಾರಾಯಣ, ಚಿದಾನಂದ ಮೂಡಲಗಿ, ಗುರುಸಿದ್ದಪ್ಪ ತಿಗಡಿ ಸೇರಿದಂತೆ ಮೊದಲಾದವರು ಹಾಜರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ