ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮನಸ್ಸು ಗೆದ್ದ ಬೆಳಗಾವಿ ಪೋರ!;

ಬೆಳಗಾವಿ-ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟಗಾರನೊಬ್ಬ ಅತ್ಯದ್ಭುತ ಫೀಲ್ಡಿಂಗ್ ಮಾಡಿ ಅತ್ಯಾಕರ್ಷಕ ಕ್ಯಾಚ್ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಖುದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೇಟಿಗರು ಈ ಆಟಗಾರನ ಫೀಲ್ಡಿಂಗ್‌ಗೆ ಫಿದಾ ಆಗಿದ್ದಾರೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮೈಕಲ್ ವೌಗನ್, ಜಿಮ್ಮಿ ನಿಶಮ್ ಸೇರಿ ಹಲವು ಕ್ರಿಕೆಟ್ ಪ್ರೇಮಿಗಳು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.‌ ಈ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು ಬೇರೆಲ್ಲಿಯೂ ಅಲ್ಲ ಕುಂದಾನಗರಿ ಬೆಳಗಾವಿಯಲ್ಲಿ. ಬೆಳಗಾವಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಖಡಕ್ ಗಲ್ಲಿಯ ಯುವಕರು ಶ್ರೀ ಚಸಕ್ 2022 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದರು.

ನಿನ್ನೆ ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಸಾಯಿರಾಜ್ ಹಾಗೂ ಎಸ್‌ಆರ್ ಎಸ್ ಹಿಂದೂಸ್ತಾನ್ ನಿಪ್ಪಾಣಿ ತಂಡದ ಮಧ್ಯೆ ಪಂದ್ಯ ನಡೆದಿತ್ತು. ಈ ಪಂದ್ಯಾವಳಿಯಲ್ಲಿ ಆಟಗಾರನೋರ್ವ ಬೌಂಡರಿ ದಾಟಿದ್ದ ಚೆಂಡನ್ನು ಫುಟ್‌ಬಾಲ್‌ನಂತೆ ಕಾಲಿನಿಂದ ಒದ್ದು ಮತ್ತೋರ್ವ ಆಟಗಾರ ಕ್ಯಾಚ್ ಹಿಡಿಯುವ ಹಾಗೇ ಮಾಡಿ ಔಟ್ ಮಾಡಿದ್ದಾನೆ. ಅತ್ಯಾಕರ್ಷಕ ಫೀಲ್ಡಿಂಗ್ ಮಾಡಿದ ಆಟಗಾರನ ಹೆಸರು ಕಿರಣ್ ತಾರಲೇಕರ್ ಬೆಳಗಾವಿಯ ವಡಗಾವಿ ನಿವಾಸಿ. ಕಿರಣ್ ತಾರಲೇಕರ್ ಬೆಳಗಾವಿ ಜಿಲ್ಲೆ ರಾಯಬಾಗದಲ್ಲಿ M.P.Ed. ವ್ಯಾಸಂಗ ಮಾಡುತ್ತಿದ್ದು ಜೊತೆಗೆ ಮಕ್ಕಳಿಗೆ ಕ್ರಿಕೆಟ್ ತರಬೇತಿ ಸಹ ನೀಡುತ್ತಿದ್ದಾರೆ.

ಇನ್ನು ಈ ಅತ್ಯಧ್ಬುತ ಫೀಲ್ಡಿಂಗ್ ಮತ್ತು ಕ್ಯಾಚ್ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ವಿಡಿಯೋ ಟ್ವೀಟ್ ಮಾಡಿದ್ದು ಫುಟ್‌ಬಾಲ್ ಹೇಗೆ ಆಡಬೇಕೆಂದು ಗೊತ್ತಿದ್ದ ಆಟಗಾರನ ಕ್ರಿಕೆಟ್ ಆಡಲು ಕರೆತಂದಾಗ ಈ ರೀತಿ ಆಗುತ್ತೆ ಎಂದು ಬರೆದುಕೊಂಡು ಖುಷಿ ಪಟ್ಟಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ, ಹಿರಿಯ ಆಟಗಾರ ಮೈಕಲ್ ವೌಗನ್, ‘ಸರ್ವಕಾಲಿಕ ಶ್ರೇಷ್ಠ ಕ್ಯಾಚ್’ ಎಂದು ಟ್ವೀಟ್ ಮಾಡಿದ್ರೆ, ನ್ಯೂಜಿಲೆಂಡ್‌ನ ಟಿ20 ಕ್ರಿಕೆಟ್ ತಂಡದ ನಾಯಕ ಜಿಮ್ಮಿ ನಿಶಾನ್ ಸಹ ಟ್ಚೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗರ ಮನ ಗೆದ್ದ ಕಿರಣ್ ತಾರಲೇಕರ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ‌.

ಬೆಖಗಾವಿ ಸುದ್ದಿ ಡಾಟ್ ಕಾಮ್  ಜೊತೆ ಸಂತಸ ಹಂಚಿಕೊಂಡ ಕಿರಣ್ ತಾರಲೇಕರ್ ಕ್ರಿಕೆಟ್ ದೇವರು ನನ್ನ ವಿಡಿಯೋ ಟ್ವೀಟ್ ಮಾಡಿದ್ದು ಖುಷಿ ತಂದಿದೆ. ಒಬ್ಬ ಆಟಗಾರನಿಗೆ ಇದಕ್ಕಿಂತ ದೊಡ್ಡ ಖುಷಿ ಇಲ್ಲ. ನಾನು ಬೆಳಗಾವಿಯ ವಡಗಾವಿಯಲ್ಲಿ ವಾಸವಿದ್ದು ರಾಯಬಾಗದಲ್ಲಿ M.P.Ed ವ್ಯಾಸಂಗ ಮಾಡುತ್ತಿದ್ದೇನೆ. ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *