Breaking News

ಬೆಳಗಾವಿಯಲ್ಲಿ,ಹುಲಿ,ಸಿಂಹ ,ಚಿರತೆ,ಕರಡಿ ತಂದು ಬಿಡಿ….!!!

ಬೆಳಗಾವಿ :ಮೈಸೂರು ಮೃಗಾಲಯ ಮಾದರಿಯಲ್ಲೇ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ರಾಣಿ ಕಿತ್ತೂರು ಚನ್ನಮ್ಮ ಮೃಗಾಲಯ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳು ಶನಿವಾರ ಸಚಿವ ರಮೇಶ ಜಾರಕಿಹೊಳಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ನಗರ ಸ್ಮಾರ್ಟ್‌ಸಿಟಿಯಾಗುತ್ತಿದೆ. ಜಿಲ್ಲೆಯಲ್ಲಿ ಗೋಕಾಕ ಫಾಲ್ಸ್, ಗೊಡಚಿನಮಲ್ಕಿ ಫಾಲ್ಸ್, ಭೀಮಗಡ ಅಭಿಯಾರಣ್ಯ, ಘಟಪ್ರಭಾ ಜಲಾಶಯ, ಶಿರೂರ ಜಲಾಶಯ, ಮಲಪ್ರಭಾ ಜಲಾಶಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿವೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ಭೂತರಾಮನಹಟ್ಟಿಯ ರಾಣಿ ಕಿತ್ತೂರು ಚನ್ನಮ್ಮ ಮೃಗಾಲಯವನ್ನು ಅಭಿವೃದ್ಧಿಗೊಳಿಸಬೇಕು. ಈ ಮೃಗಾಲಯಕ್ಕೆ ಹುಲಿ ಸಫಾರಿ, ಸಿಂಹ, ಚಿರತೆ, ಕರಡಿ, ಜೀರಾಫೆಗಳು ಸೇರಿದಂತೆ ಮತ್ತಿತರ ವನ್ಯಜೀವಿಗಳನ್ನು ಸೇರ್ಪಡೆಗೊಳಿಸಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜನ ಸಮುದಾಯದಲ್ಲಿ ವನ್ಯಪ್ರಾಣಿ, ಪಕ್ಷಿಗಳ ಮತ್ತು ವನ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವುದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯವಾಗಿದೆ. ಅರಣ್ಯ ಇಲಾಖೆಯಿಂದ ಈಗಾಗಲೇ ಸುಸಜ್ಜಿತ ಮೃಗಾಲಯದ ಇತರೇ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ. ಇದರಿಂದ ಜಿಲ್ಲೆಗೆ ಹೊಸ ಕಾಂತಿ ಮೂಡಲಿದೆ. ಜೊತೆಗೆ ಪ್ರವಾಸಿಗರ ಸಂಖ್ಯೆ ಇಮ್ಮಡಿಗೊಳ್ಳುವುದಲ್ಲದೆ ಜಿಲ್ಲಾ ಪ್ರವಾಸೋದ್ಯಮ ಗಟ್ಟಿಗೊಳಿಸಬಹುದಾಗಿದೆ. ಇಂಥಹ ಹೊಸ, ಹೊಸ ಆರ್ಥಿಕ ಸಂಪನ್ಮೂಲ ಒದಗಿಸಬಲ್ಲ ಯೋಜನೆಗಳಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಈ ಮೃಗಾಲಯಕ್ಕೆ ಕೊರತೆ ಇರುವ ಅವಶ್ಯಕ ಅನುದಾನ ಒದಗಿಸಲು ತಾವುಗಳು ಆಸಕ್ತಿ ವಹಿಸಬೇಕು. ಅಲ್ಲದೆ, ಈ ಕುರಿತು ಶೀಘ್ರ ಕ್ರಮ ಜರುಗಿಸಿ ಅತ್ಯವಶ್ಯಕ ಮೃಗಾಲಯದ ಉನ್ನತೀಕರಣಕ್ಕೆ ಅನುದಾನವನ್ನು ಮಹಾನಗರಪಾಲಿಕೆ, ಸ್ಮಾರ್ಟ್ ಸಿಟಿ ಯೋಜನಾ ಸಮಿತಿ, ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಭರಿಸಿ ಕೂಡಲೇ ಜನಾಕರ್ಷಿಸಬಲ್ಲ ಎಲ್ಲ ವನ್ಯ ಪ್ರಾಣಿಗಳನ್ನು ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಅತ್ಯಾಕರ್ಷಕ ಯೋಜನೆಗೆ ಜಿಲ್ಲಾಧಿಕಾರಿಗಳು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರು, ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರ ತುರ್ತು ಸಭೆ ಆಯೋಜಿಸಿ ಯೋಜನೆಗೆ ಅಸ್ತು ನೀಡಬೇಕು. ಈ ಮೂಲಕ ಸುಂದರ ಬೆಳಗಾವಿ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಸಚಿವರಲ್ಲಿ ಪದಾಧಿಕಾರಿಗಳು ಮನವಿ ಮಾಡಿದರು.
ರಾಣಿ ಕಿತ್ತೂರು ಚನ್ನಮ್ಮ ಮೃಗಾಲಯ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಶ್ರೀಶೈಲ ಮಠದ, ಜಗದೀಶ ಮಠದ, ಶಿವನಪ್ಪ ಕಮತ, ಮಲ್ಹಾರ ದೀಕ್ಷಿತ ಇದ್ದರು.

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *