ಬೆಳಗಾವಿ ಬಾರ್ ಅಧ್ಯಕ್ಷ ಪ್ರಭು ಯತ್ನಟ್ಟಿ ಸನ್ನದು ಶಾಶ್ವತ ರದ್ದು…!

ಬೆಳಗಾವಿ- ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಭು ಯತ್ನಿಟ್ಟಿ, ಕಕ್ಷಿದಾರನ ಲಕ್ಷಾಂತರ ರೂ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಪರಿಷತ್ತಿನ ಶಿಸ್ತು ಸಮೀತಿ ಮಹತ್ವದ ತೀರ್ಪು ನೀಡಿದೆ.ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಸ್ವಾಧೀನವಾದ ಜಮೀನಿಗೆ ಪರಿಹಾರ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ್ದ ರೈತನಿಗೆ ವಕೀಲರೊಬ್ಬರು ಲಕ್ಷಾಂತರ ರೂ.ವಂಚಿಸಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಕೀಲರ ಪರಿಷತ್ತಿನ ಶಿಸ್ತು ಸಮಿತಿಯು ತಪ್ಪಿತಸ್ಥ ವಕೀಲ ಪ್ರಭು ಯತ್ನಟ್ಟಿ ಅವರ ಸನ್ನದು ಶಾಶ್ವತವಾಗಿ ರದ್ದುಗೊಳಿಸಿ, ಜೂ.19 ರಂದು ಆದೇಶ ಹೊರಡಿಸಿದೆ. ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಭು ಯತ್ನಟ್ಟಿ ವಂಚಿಸಿರುವ ಆರೋಪ ಎದುರಿಸುತ್ತಿರುವರು. ಖಾನಾಪುರದ ಸುಭಾಷ ಆರ್. ಪೂಜಾರಿ ಎಂಬುವರು ಪ್ರಭು ಯತ್ನಟ್ಟಿ ವಿರುದ್ಧ ಸುಧೀರ್ಘ ಕಾನೂನು ಹೋರಾಟ ನಡೆಸಿ ತನ್ನ ಜಮೀನಿನ 99 ಲಕ್ಷ ರೂ.ಪರಿಹಾರ ನೀಡುವಂತೆ ಆದೇಶ ಪಡೆದ ರೈತ.
ಪ್ರಕರಣ ವಿಚಾರಣೆ ನಡೆಸಿದ ಶಿಸ್ತು ಸಮಿತಿ ಅಧ್ಯಕ್ಷ ನರಸಿಂಹಸ್ವಾಮಿ ಎನ್.ಎಸ್., ಸದಸ್ಯರಾದ ರಾಜಣ್ಣ ಆರ್,ಹಾಗೂ ಚಂದ್ರಮೌಳಿ ಬಿ.ಆರ್.ಅವರು ತಪ್ಪಿತಸ್ಥ ವಕೀಲ ಯತ್ನಟ್ಟಿಯ ಸನ್ನದು ಶಾಶ್ವತವಾಗಿ ರದ್ದು ಮಾಡಿದ್ದಾರೆ. ಜತೆಗೆ ನೊಂದ ರೈತನಿಗೆ ನೀಡಬೇಕಾಗಿದ್ದ ಭೂಸ್ವಾ ಧೀನ ಪರಿಹಾರದ ಹಣ ತೆಗೆದು ಕೊಂಡಿದ್ದಷ್ಟೂ 99,68,582 ರೂ.ಮರುಪಾವತಿಸಬೇಕು. ಜತೆಗೆ ಪ್ರೊಸೆಸಿಂಗ್ ಶುಲ್ಕವಾಗಿ ಪಡೆದಿದ್ದ 20 ಸಾವಿರ ರೂ.ಗಳ ಪೈಕಿ, 10 ಸಾವಿರ ರೂ.ಗಳನ್ನು ಸುಭಾಷ ಪೂಜಾರಿಗೆ ಹಿಂದಿರುಗಿಸಬೇಕು. ವಕೀಲರ ಪರಿಷತ್ತಿಗೆ 10 ಸಾವಿರ ರೂ.ದಂಡ ಪಾವತಿಸಬೇಕು ಎಂದು ಶಿಸ್ತು ಸಮಿತಿ ತನ್ನ ಆದೇಶದಲ್ಲಿ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಖಾನಾಪುರ-ಗೋವಾ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್-4ಎ) ಅಗಲೀಕರಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ಖಾನಾಪುರದ ರೈತ ಸುಭಾಷ ಆರ್ ಪೂಜಾರಿ ಅವರು, 2018ರ ಸೆಪ್ಟೆಂಬರ್‌ನಲ್ಲಿ ಪರಿಹಾರ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಕೋವಿಡ್ ಸಮಯದಲ್ಲಿ ಅನಾರೋಗ್ಯಕ್ಕೀಡಾಗಿ ಪಾವರ್ ಆಫ್ ಅಟಾರ್ನಿಯನ್ನು ತಮ್ಮ ಮಗಳಿಗೆ ನೀಡಿ, ಕಾನೂನು ಹೋರಾಟ ಮುಂದುವರಿಸಿದ್ದರು.

ನಿಯಮಾನುಸಾರ 2018ರ ನವೆಂಬರ್ 18ರಂದು ಪರಿಹಾರ ಬಿಡುಗಡೆಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ವಕಾಲತು ವಹಿಸಿದ್ದ ವಕೀಲ ಪ್ರಭು ಯತ್ನಟ್ಟಿ ಅವರನ್ನು ಕೇಳಿದಾಗ ಅಸಮರ್ಪಕ ಉತ್ತರ ಕಂಡು, ಅನುಮಾನಗೊಂಡಿದ್ದಾರೆ. ಬಳಿಕ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಹಣ ಬಿಡುಗಡೆಯಾಗಿರುವ ಬಗ್ಗೆ ಎಲ್ಲ ದಾಖಲೆಗಳನ್ನು ಪಡೆದು, ತಮ್ಮ ಹೆಸರಿಗೆ ಬಂದ ಖಾತೆಯ ಎಲ್ಲ ದಾಖಲೆ ಪಡೆದಿದ್ದಾರೆ. ಅವುಗಳ ಪ್ರಕಾರ ರೈತ ನೀಡಿದ ಪವರ್ ಆಫ್ ಅಟಾರ್ನಿ ಬಳಸಿ, ಪರಿಹಾರವಾಗಿ ಬಂದಿದ್ದ ಒಟ್ಟು 99, 68,582 ರೂ.ಮೊತ್ತವನ್ನು ಬೆಳಗಾವಿಯಲ್ಲಿನ ಬ್ಯಾಂಕೊಂದರ ಚೆಕ್ ಮೂಲಕ ತನ್ನ ಖಾತೆಗೆ ಜಮೆ ಮಾಡಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಇತರ ವಕೀಲರಿಂದ ಮಾಹಿತಿ ಪಡೆದ ರೈತ, ವಕೀಲರ ಶಿಸ್ತು ಸಮಿತಿ ಮುಂದೆ ಪ್ರಕರಣದ ಸಂಪೂರ್ಣ ದಾಖಲೆ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದರು.

ಪ್ರಭು ಯತ್ನಟ್ಟಿ ಹೇಳಿದ್ದು…

ಇದು ನನ್ನ ವಿರುದ್ಧ ನಡೆದ ಷಡ್ಯಂತ್ರವಾಗಿದೆ.ಈ ಪ್ರಕರಣದ ರೈತ ನನ್ನ ಕಕ್ಷಿದಾರ ಅಲ್ಲ,ಶಿಸ್ತು ಸಮೀತಿ ಹತ್ತಿರ ನನ್ನ ಅಭಿಪ್ರಾಯ ಮಂಡಿಸಲು ನನಗೆ ಅವಕಾಶ ಸಿಕ್ಕಿಲ್ಲ,ಈ ಕುರಿತು ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತೇನೆ ನನಗೆ ನ್ಯಾಯ ಸಿಗುತ್ತದೆ. ಎಂದು ನ್ಯಾಯವಾದಿ ಪ್ರಭು ಯತ್ನಟ್ಟಿ ಮಾದ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *