Breaking News
Home / Breaking News / ಬೆಳಗಾವಿಯ ಪ್ರಸಿದ್ಧ ದೇಗುಲ,ಅಭಿವೃದ್ಧಿ ಆಗೋದು ಯಾವಾಗ…!!

ಬೆಳಗಾವಿಯ ಪ್ರಸಿದ್ಧ ದೇಗುಲ,ಅಭಿವೃದ್ಧಿ ಆಗೋದು ಯಾವಾಗ…!!

ಬೆಳಗಾವಿ: ಸದತ್ತಿಯ ಯಲ್ಲಮ್ಮನ ದೇವಸ್ಥಾನ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಟಾಪ್ ೧೦ ದೇವಸ್ಥಾನಗಳಲ್ಲಿ ಒಂದು ಹಾಗೂ ಮಹಿಳಾ ಭಕ್ತರ ಅತ್ಯಧಿಕ ಪ್ರಮಾಣದಲ್ಲಿ ಭೇಟಿ ನೀಡುವ ಕ್ಷೇತ್ರ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಆದರೆ, ಮೂಲಸೌಕರ್ಯಗಳ ವಿಚಾರಕ್ಕೆ ಬಂದರೆ ದೇವಸ್ಥಾನ ಅತಿ ಹಿಂದುಳಿದಿರುವುದು ಸುಳ್ಳಲ್ಲ.

ಹೌದು, ಪ್ರತಿವರ್ಷ ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟç, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶಾದ್ಯಂತ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಅದರಲ್ಲೂ ಜಾತ್ರೆ ನಡೆಯುವ ಭಾರತ ಹುಣ್ಣಿಮೆಯ ಬರುವ ಒಂದು ತಿಂಗಳವAತೂ ಪ್ರತಿನಿತ್ಯ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ಪ್ರತಿವರ್ಷ ಭಕ್ತರಿಂದ ಕೊಟ್ಯಂತರ ರೂಪಾಯಿ ವರಮಾನ ಬರುತ್ತದೆ. ಮೊನ್ನೆಯಷ್ಟೇ ಶಕ್ತಿ ಯೋಜನೆ ಪ್ರಾರಂಭವಾದ ೨ ತಿಂಗಳಲ್ಲಿ ದೇವಸ್ಥಾನದ ಹುಂಡಿಗೆ ಬರೋಬ್ಬರಿ ೧.೩೭ ಕೋಟಿ ರೂ. ಸಂಗ್ರವಾದ ಸುದ್ದಿ ಸದ್ದು ಮಾಡಿತ್ತು. ಇಷ್ಟೆಲ್ಲ ಇದ್ದರೂ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸರಿಯಾಗಿ ವಸತಿ ವ್ಯವಸ್ಥೆ, ಶೌಚಾಲಯ, ಸ್ನಾನಗೃಹದ ವ್ಯವಸ್ಥೆ ಇಲ್ಲದಿರುವುದು ಖೇದಕರ ಸಂಗತಿ.

ರಾಜ್ಯದ ಧರ್ಮಸ್ಥಳ, ನೆರೆಯ ರಾಜ್ಯಗಳ ತಿರುಪತಿ, ಫಂಡರಪುರ, ಮಂತ್ರಾಲಯಗಳಲ್ಲಿ ಅಲ್ಲಿನ ಆಡಳಿತ ಮಂಡಳಿಗಳು ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಿವೆ. ಈ ಕ್ಷೇತ್ರಗಳಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿದರೂ ಅಗತ್ಯ ವಸತಿನಿಲಯಗಳು, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಕೊರತೆಯಿಲ್ಲ. ಇಲ್ಲಿ ಮೂಲಸೌಕರ್ಯದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದ್ದು, ಭಕ್ತರಿಂದ ಬರುವ ದೇಣಿಯಲ್ಲೇ ಉತ್ತಮವಾದ ಮೂಲಸೌಲಭ್ಯ ಒದಗಿಸಲಾಗಿದೆ. ಅಲ್ಲದೆ ಅಚ್ಚುಕಟ್ಟಾಗಿ ಇವುಗಳ ನಿರ್ವಹಣೆ ಮಾಡುತ್ತಿರುವುದರಿಂದ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ.

ಆದರೆ, ಯಲ್ಲಮ್ಮನ ಗುಡ್ಡದ ವಿಚಾರಕ್ಕೆ ಬಂದರೆ ವಸತಿ, ಶೌಚಾಲಯ, ಸ್ನಾನಕ್ಕೆ ಹಾಗೂ ಶುದ್ಧ ಕುಡಿಯುವ ನೀರಿನ ಕೊರತೆಯೇ ದೊಡ್ಡ ಕಳಂಕವಾಗಿದೆ. ಒಂದು ತಿಂಗಳು ನಡೆಯುವ ಜಾತ್ರೆಯ ಸಮಯದಲ್ಲಂತೂ ಅಗತ್ಯ ವಸತಿ ವ್ಯವಸ್ಥೆ, ಶೌಚಾಲಯಗಳ ಕೊರತೆಯಿಂದ ಇಡೀ ಕ್ಷೇತ್ರದಲ್ಲಿ ಎಲ್ಲಿ ನೋಡಿದರಲ್ಲಿ ಮಲಮೂತ್ರಗಳಿಂದ ಗಲೀಜು ವಾತಾವರಣ ಕಣ್ಣಿಗೆ ರಾಚುತ್ತದೆ.
ಪ್ರತಿವರ್ಷ ಭಕ್ತರ ಕಾಣಿಕೆಯಿಂದ ಬರುವ ಕೊಟ್ಯಂತರ ರೂಪಾಯಿ ವರಮಾನ ಏನಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ವರಮಾನದ ಸದ್ಬಳಕೆ ಆಗಿದ್ದರೆ ಯಲ್ಲಮ್ಮನ ಗುಡ್ಡ ಕ್ಷೇತ್ರವೂ ತಿರುಪತಿ, ಶಿರಡಿ, ಧರ್ಮಸ್ಥಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬಹುದಿತ್ತು. ಜಾಗದ ಕೊರತೆಯಂತೂ ಇಲ್ಲ. ಸುತ್ತಮುತ್ತಲೂ ಪಾಳು ಜಮೀನು ಇದೆ.

ಭಕ್ತರಿಂದ ಬರುವ ಕಾಣಿಕೆ ಹಣದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಯಾತ್ರಿ ನಿವಾಸಗಳು, ಶೌಚಾಲಯ, ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಿದರೆ ರಾಷ್ಟçಮಟ್ಟದ ಯಾತ್ರಾ ಸ್ಥಳವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ. ತಿರುಪತಿ, ಫಂಡರಪೂರ ಮಾದರಿಯಲ್ಲಿ ಖಾಸಗಿಯವರಿಗೆ ನಿರ್ವಹಣೆ ಜವಾಬ್ದಾರಿ ನೀಡಿದರೆ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಬಹುದಾಗಿದೆ.
ಜೋಗುಳ ಬಾವಿಯಲ್ಲಿಯೂ ಅವ್ಯವಸ್ಥೆ
ಯಲ್ಲಮ್ಮನ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರೂ ಸಮೀಪದಲ್ಲಿರುವ ಜೋಗುಳಬಾವಿಗೆ ಭೇಟಿ ನೀಡುವುದು ಸಂಪ್ರದಾಯ. ಇಲ್ಲಿ ಸ್ನಾನ ಮಾಡಿದರೆ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಈ ಜೋಗುಳಬಾವಿಯಲ್ಲಿ ಸ್ನಾನ ಮಡಿಕೊಂಡೇ ದೇವಿಯ ದರ್ಶನಕ್ಕೆ ತೆರಳುತ್ತಾರೆ. ಆದರೆ, ಅಲ್ಲಿನ ಗಲೀಜು ನೀರಲ್ಲೇ ಭಕ್ತರು ಸ್ನಾನ ಮಾಡುವುದನ್ನು ಕಂಡರೆ ಮೈ ಜುಮ್ಮೆನಿಸುತ್ತದೆ. ಜೋಗುಳಬಾವಿಗೆ ನಿರಂತರ ನೀರು ಪೂರೈಕೆ ವ್ಯವಸ್ಥೆ ಮಾಡಿ ಬಾವಿಯಲ್ಲಿನ ನೀರು ಹರಿದುಹೋಗುವಂತೆ ಮಾಡಿ ಸ್ವಚ್ಛತೆ ಕಾಪಾಡುವುದು ಅವಶ್ಯವಾಗಿದೆ.

ದೇವಸ್ಥಾನದ ನಿರ್ವಹಣೆ ಜಿಲ್ಲಾಡಳಿತ ಕೈಯಲ್ಲಿದೆ. ನೂತನ ಜಿಲ್ಲಾಧಿಕಾರಿಯಾಗಿ ಡೈನಾಮಿಕ್ ಸ್ಟಾರ್ ಎಂದೇ ಕರೆಯುವ ನಿತೀಶ್ ಪಾಟೀಲ್ ಅವರು ಆಗಮಿಸಿದ್ದಾರೆ. ಇವರ ಅವಧಿಯಲ್ಲಾದರೂ ಯಲ್ಲಮ್ಮನ ಕ್ಷೇತ್ರದಲ್ಲಿ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನೂತನ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *