ಲೋಳಸೂರ ಬಳಿ ಹೊಸ ಸೇತುವೆ ನಿರ್ಮಾಣ- ಸತೀಶ್ ಜಾರಕಿಹೊಳಿ

 

ಗೋಕಾಕ: ಘಟಪ್ರಭಾ ನದಿ ಆರ್ಭಟಕ್ಕೆ ಗೋಕಾಕ್ ಜನತೆ ತತ್ತರಿಸಿದ್ದು, ಇಂದು ಬೆಳ್ಳಂಬೆಳಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಲೋಳಸೂರು ಸೇತುವೆ ಸೇರಿದಂತೆ ಪಟ್ಟಣದ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದ ಮಟನ್‌ ಮಾರುಕಟ್ಟೆ, ಕುಂಬಾರ ಗಲ್ಲಿ, ಹಳೆ ದನಗಳ ಮಾರುಕಟ್ಟೆಯಲ್ಲಿ ಪ್ರವಾಹದಿಂದ ಉಂಟಾದ ಅವಾಂತರಗಳ ಬಗ್ಗೆ ಮಾಹಿತಿ ಪಡೆದು, ಪಟ್ಟಣದ ಹೊರವಲಯದಲ್ಲಿರುವ ಲೋಳಸೂರು ಸೇತುವೆಯ ಸ್ಥಿತಿಗತಿ ಅವಲೋಕಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಳಸೂರು ಬಳಿ ಹೊಸ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಶೀಘ್ರವೇ ಎಸ್ಟಿಮೇಂಟ್‌ ಮಾಡಿ ಟೆಂಡರ್ ಕರೆಯುತ್ತೇವೆ. ಆದರೆ ನೂತನ ಸೇತುವೆ ನಿರ್ಮಾಣಕ್ಕೆ ಎರಡು ವರ್ಷ ಅವಧಿ ಬೇಕಾಗುತ್ತದೆ ಎಂದು ತಿಳಿಸಿದರು.

ಲೋಳಸೂರು ಸೇತುವೆ ಮುಳುಗಡೆಯಾಗಿ ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳಿಗೆ ತೊಂದರೆ ಆಗಿತ್ತು. ಈಗ ನೀರಿನ ಮಟ್ಟ ಕಡಿಮೆಯಾಗಿದೆ. ವಿದ್ಯಾರ್ಥಿಗಳ ಅನುಕೂಲ ದೃಷ್ಟಿಯಿಂದ ಅಧಿಕಾರಿಗಳಿಗೆ ಲೋಳಸೂರು ಸೇತುವೆಯನ್ನು ಶೀಘ್ರವೇ ಪರಿಶೀಲಿಸಿ ತಾತ್ಕಾಲಿಕ ಬಸ್ ಸಂಚಾರ ಆರಂಭಿಸುವಂತೆ ಸೂಚನೆ ನೀಡಿದ್ದೇನೆ ಎಂದರು.

ನಂತರ ನೂತನವಾಗಿ ನಿರ್ಮಿಸಿರುವ ಗೋಕಾಕ-ಶಿಂಗಳಾಪುರ ಸೇತುವೆಗೂ ಭೇಟಿ ಪರಿಶೀಲನೆ ನಡೆಸಿದ ಸಚಿವ ಸತೀಶ್‌ ಜಾರಕಿಹೊಳಿ ಅವರು, ಗೋಕಾಕ ಪಟ್ಟಣದ ಹೊರ ವಲಯದ ಮಾರ್ಕಂಡೇಯ ನದಿ ಪಕ್ಕದಲ್ಲಿರುವ ಪ್ರವಾಸಿ ತಾಣ ಯೋಗಿಕೊಳ್ಳಕ್ಕೂ ಭೇಟಿ ನೀಡಿದರು.

ಬೆಳ್ಳಂಬೆಳಗ್ಗೆಯೇ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಲು ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಕಂಡ ಗೋಕಾಕ ಪಟ್ಟಣದ ಜನತೆ ಖುಷಿ ವ್ಯಕ್ತಪಡಿಸಿ, ತಮ್ಮ ಸಮಸ್ಯೆಗಳನ್ನು ಸಚಿವರ ಬಳಿ ತೊಡಿಕೊಂಡರು. ಇದೇ ವೇಳೆ ಜನತೆ ಮನವಿಗೆ ಸ್ಪಂದಿಸಿದ ಸಚಿವ ಸತೀಶ್‌ ಜಾರಕಿಹೊಳಿ, ತಮ್ಮ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಮಾಡುತ್ತೇನೆ. ಪ್ರವಾಹದಿಂದ ಯಾರು ಭಯಭೀತರಾಗಬೇಡಿ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬಿದರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *