ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆ ಪೈಪೋಟಿ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮೊದಲು ಎಲೆಕ್ಷನ್ ಆಗಲಿ, ಶಾಸಕರು ಆರಿಸಿ ಬರಲಿ, ಆ ಮೇಲೆ ಪೈಪೋಟಿ ಮಾಡಲಿ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಎಲೆಕ್ಷನ್ ಆಗಬೇಕು.ಶಾಸಕರು ಆರಿಸಿ ಬರಬೇಕು.ಬಳಿಕ ಪೈಪೋಟಿ ಮಾಡಲಿ ಎಂದರು. ಡಿ.ಕೆ.ಶಿವಕುಮಾರ್ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಸಂದರ್ಭದಲ್ಲಿ, ಯಾವುದಕ್ಕೋಸ್ಕರ ಹೇಳಿದ್ದಾರೆ ನಾನು ನೋಡಲಿಲ್ಲ. ಮೊದಲು 224 ಕ್ಷೇತ್ರಗಳಲ್ಲಿ 114-115 ಜನ ಎಂಎಲ್ಎ ಆರಿಸಿ ಬರಲಿ.ಬಳಿಕ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಆಗಬೇಕು. ಕಾಂಗ್ರೆಸ್ ಪಕ್ಷದಲ್ಲಿ ಒಂದು ಸಿಸ್ಟಮ್ ಇದೆ. ಹೈಕಮಾಂಡ್ ಇದೆ.ಹೈಕಮಾಂಡ್ ಯಾರ ಹೆಸರನ್ನು ಸೂಚಿಸುತ್ತಾರೋ?..ಶಾಸಕಾಂಗ ಸಭೆಯಲ್ಲಿ ಎಲ್ಲರೂ ಯಾರನ್ನು ನಾಯಕರು ಅಂತಾ ಒಪ್ಪಿಕೊಳ್ಳುತ್ತಾರೆ ಅಂತವರು ಸಿಎಂ ಆಗ್ತಾರೆ ಎಂದು ತಮ್ಮದೇ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಸಿದ್ದರಾಮೋತ್ಸವಕ್ಕೆ ಮೂಲ ಕಾಂಗ್ರೆಸ್ಸಿಗರಿಂದ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೂ ಅಸಮಾಧಾನ ಇಲ್ಲ. ಹಳೆ ಕಾಂಗ್ರೆಸ್ ಹೊಸ ಕಾಂಗ್ರೆಸ್ ಅಂತಾ ಇಲ್ವೇ ಇಲ್ಲ.ರಾಹುಲ್ ಗಾಂಧಿಯವರೇ ಮುಂಚೂಣಿಯಲ್ಲಿ ನಿಂತು ಮುಖ್ಯ ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ. ಇಡೀ ಕಾಂಗ್ರೆಸ್ ಪರಿವಾರ ಈ ಕಾರ್ಯಕ್ರಮವನ್ನು ಮಾಡ್ತಿದೆ. ಉದಾಹರಣೆಗೆ ನಾನೇ ಹುಬ್ಬಳ್ಳಿ ಧಾರವಾಡಕ್ಕೆ ಇನ್ಚಾರ್ಜ್ ಆಗಿದ್ದೇನೆ. ಸುಮಾರು ಜನ ಸುಮಾರು ಕಮಿಟಿಗಳಲ್ಲಿ ಕೆಲಸ ಮಾಡ್ತಿದ್ದೇವೆ.75ವರ್ಷದ ಸಾಧನೆ, 40ವರ್ಷ ರಾಜಕಾರಣದಲ್ಲಿ ರಾಜ್ಯಕ್ಕೆ ತನ್ನದೇ ಶೈಲಿಯಲ್ಲಿ ಸೇವೆ ಮಾಡಿದ್ದಾರೆ.ಇದು ಹೆಮ್ಮೆಯ ವಿಚಾರ.ಸಿದ್ದರಾಮಯ್ಯ ಸಾಹೇಬ್ರು ನಮ್ಮ ಪ್ರಶ್ನಾತೀತ ನಾಯಕರು.ಅವರ ಹುಟ್ಟುಹಬ್ಬವನ್ನು ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.
ಸಿದ್ದರಾಮೋತ್ಸವಕ್ಕೆ ಬೆಳಗಾವಿ ಜಿಲ್ಲೆಯಿಂದ ಕಾರ್ಯಕರ್ತರು ತೆರಳುವ ವಿಚಾರಕ್ಕೆ, ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಈಗಾಗಲೇ ಒಂದು ಸುತ್ತಿನ ಸಭೆಯಾಗಿದೆ.ಪ್ರತಿಯೊಂದು ಕ್ಷೇತ್ರದಿಂದ ಎರಡು ಸಾವಿರ ಜನ ಹೋಗುವ ನಿರೀಕ್ಷೆ ಇದೆ. ಬೆಳಗಾವಿ ಇಡೀ ಜಿಲ್ಲೆಯ ಇನ್ಚಾರ್ಜ್ ಸತೀಶಣ್ಣಾ ಜಾರಕಿಹೊಳಿ ಇದ್ದಾರೆ. ಯಾರಿಗಾದರೂ ಬಸ್ ಸೌಲಭ್ಯ ಸೇರಿ ಇತರೆ ಸೌಲಭ್ಯ ಬಗ್ಗೆ ನಂಗೆ ಹೇಳಿದ್ರೆ ಇಡೀ ಜಿಲ್ಲೆಯ ಜವಾಬ್ದಾರಿ ತಗೆದುಕೊಳ್ಳಲು ಸಿದ್ಧವಾಗಿದ್ದೇನೆ ಎಂದು ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ