ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ನಿನ್ನೆಯ ದಿನ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತರು,ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಿ ಗೊಂದಲ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ವೈಫಲ್ಯಕ್ಕೆ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಥೋಡ್,ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಖಡೇಬಜಾರ್ ಠಾಣೆ ಪೇದೆ ಬಿ.ಎ ನೌಕುಡಿ, ಕ್ಯಾಂಪ್ ಠಾಣೆ ಪೇದೆ ಮಲ್ಲಪ್ಪ ಹಡಗಿನಾಳ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.
ವೇದಿಕೆ ಮುಂಭಾಗದಲ್ಲಿ ಎಎಸ್ಪಿ, ಎಸಿಪಿ ದರ್ಜೆ ಅಧಿಕಾರಿಗಳು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು,ಬಿಜೆಪಿಯ ಮಹಿಳಾ ಕಾರ್ಯಕರ್ತರು ಕಾಂಗ್ರೆಸ್ ಸಮಾವೇಶದಲ್ಲಿ ನುಗ್ಗಿ ಸಿಎಂ ಗೆ ಕಪ್ಪುಬಾವುಟ ಪ್ರದರ್ಶನ ಮಾಡುವ ಮಾಹಿತಿಯನ್ನು ಪಡೆಯುವಲ್ಲಿ ಗುಪ್ತಚರ ಇಲಾಖೆ ವಿಫಲರಾದರೂ ಸಹ, ಕಾನ್ಸಸ್ಟೇಬಲ್ ದರ್ಜೆಯ ಸಿಬ್ಬಂದಿ ಅಮಾನತು ಮಾಡಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ.
ವಿಶೇಷ ಅಂದ್ರೆ ಅಮಾನತುಗೊಂಡ ಇಬ್ಬರೂ ಸಿಬ್ಬಂದಿ ವೇದಿಕೆ ಬಳಿ ಕರ್ತವ್ಯಕ್ಕೆ ಇರಲಿಲ್ಲ,ಬಿ.ಎ ನೌಕುಡಿ ಚೆನ್ನಮ್ಮ ವೃತ್ತದಲ್ಲಿ ಹಾಗೂ ಮಲ್ಲಪ್ಪ ಹಡಗಿನಾಳ ಬೇರೆಡೆ ಕರ್ತವ್ಯಕ್ಕೆ ಹಾಜರಾಗಿದ್ದರು.ಹೀಗಿದ್ದರೂ ಇಬ್ಬರನ್ನೂ ಅಮಾನತು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.ಗುಪ್ತ ಮಾಹಿತಿ ಸಂಗ್ರಹಿಸಿ ಪ್ರತಿಭಟನೆ ತಡೆಯುವಲ್ಲಿ ವಿಫಲವಾಗಿದಕ್ಕೆ ಕ್ರಮ ಎಂದು ಸಸ್ಪೆಂಡ್ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.