ಮಹಾದಾಯಿ ಕಾನೂನು ತೊಡಕು ನಿವಾರಣೆ ನಂತರ ಕಾಮಗಾರಿ-ರಮೇಶ್ ಜಾರಕಿಹೊಳಿ

ಬೆಳಗಾವಿ-ಮಹಾದಾಯಿ ನದಿ ನೀರಿನ ಹಂಚಿಕೆ ಕುರಿತು ಸರ್ವೋಚ್ಛ ನ್ಯಾಯಾಲಯದ ಐತೀರ್ಪಿನ್ವಯ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಪೂರ್ಣಪ್ರಮಾಣದಲ್ಲಿ ಕಾನೂನು ತೊಡಕು ನಿವಾರಣೆಯ ನಂತರ ಕಳಸಾ ಬಂಡೂರಿ ನಾಲಾ ಯೋಜನೆಯ ಅನುಷ್ಟಾನವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ನೀರಾವರಿ ಖಾತೆ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಅಂತಿಮ ತೀರ್ಪು ಬರುವ ಜುಲೈ ತಿಂಗಳಿನಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ನಾಡಿದ್ದು ಸೋಮವಾರ ಸರ್ವೋಚ್ಛ ನ್ಯಾಯಾಲಯದ ಮುಂದೆ ವಿಷಯ ಪ್ರಸ್ತಾಪವಾಗಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ನ್ಯಾಯಾಲಾಯದ ಆದೇಶದ ಪ್ರಕಾರ ಮಹಾದಾಯಿ ನದಿಯಿಂದ 32 ಟಿಎಂಸಿಕ್ಕಿಂತ ಹೆಚ್ಚು ನೀರು ಲಭ್ಯವಾಗಲಿದೆ. ಮುಂದೆ ಕುಡಿಯುವ ನೀರಿನ ಲಭ್ಯತೆಗೆ ಯಾವುದೇ ತೊಂದರೆಯುಂಟಾಗುವುದಿಲ್ಲ. ಜುಲೈನಲ್ಲಿ ಪ್ರಕಟಗೊಳ್ಳುವ ಅಂತಿಮ ತೀರ್ಪಿನ್ವಯ 44 ಟಿಎಂಸಿಕ್ಕಿಂತಲೂ ಹೆಚ್ಚು ನೀರು ಕರ್ನಾಟಕಕ್ಕೆ ದೊರೆಯುವ ಸಾಧ್ಯತೆಯಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಕಳಸಾ ಬಂಡೂರಿ ನಾಲಾ ಯೋಜನೆಯ ಕಾಮಗಾರಿಗಳ ಅನುಷ್ಟಾನಕ್ಕೆ ಹಣಕಾಸಿನ ಕೊರತೆಯಿಲ್ಲ. ಅಧಿಸೂಚನೆ ಹೊರಡಿಸುವ ಮುನ್ನ ಎರಡನೂರು ಕೋಟಿ ರೂಪಾಯಿಗಳನ್ನು ಮೀಸಲಿಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಅಧಿಸೂಚನೆ ಪ್ರಕಟಗೊಂಡ ನಂತರ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಪ್ರಸಕ್ತ ಬಜೆಟ್‍ನಲ್ಲಿ ಕಾಯ್ದಿರಿಸುವಂತೆ ವಿನಂತಿಸಿಕೊಳ್ಳಲಾಗಿದೆ. ಕಾಮಾಗಾರಿ ಅನುಷ್ಟಾನಕ್ಕೆ ಅದೇಷ್ಟೇ ಹಣ ವೆಚ್ಚವಾದರೂ ಸರ್ಕಾರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಕಾವೇರಿ, ಮೇಕೆದಾಟ ಮೊದಲಾದ ನದಿ ನೀರಿನ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಲಿದ್ದು, ಈ ಹಿನ್ನಲೆಯಲ್ಲಿ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಲಾಗುವುದು ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *