Breaking News
Home / Breaking News / ದೇಶದ ಮೊದಲ ಕಿಸಾನ್ ರೈಲಿಗೆ,ಸುರೇಶ್ ಅಂಗಡಿ ಗ್ರೀನ್ ಸಿಗ್ನಲ್

ದೇಶದ ಮೊದಲ ಕಿಸಾನ್ ರೈಲಿಗೆ,ಸುರೇಶ್ ಅಂಗಡಿ ಗ್ರೀನ್ ಸಿಗ್ನಲ್

 

ಬೆಳಗಾವಿ,-: ದೇಶದ ಮೊಟ್ಟಮೊದಲ ಕಿಸಾನ್ ರೈಲು ಸಂಚಾರಕ್ಕೆ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ಶುಕ್ರವಾರ ಹಸಿರುನಿಶಾನೆ ತೋರಿಸಿದರು.

ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಸಂಚರಿಸಲಿರುವ ಮೊದಲ ಕಿಸಾನ್ ರೈಲಿಗೆ ವರ್ಚುವಲ್ ವೇದಿಕೆಯ ಮೂಲಕ ನವದೆಹಲಿಯಿಂದ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ತೋಮರ್ ಅವರು, ಕಿಸಾನ್ ರೈಲು ಕೃಷಿ ಕ್ಷೇತ್ರದ ಪ್ರಗತಿಗೆ ಮತ್ತು ಬೆಳೆಗೆ ನ್ಯಾಯಯುತ ದರ ಒದಗಿಸಲು ಸಹಕಾರಿಯಾಗಲಿದೆ. ಪ್ರಧಾನಮಂತ್ರಿಗಳ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಇಂತಹ‌ ಕಿಸಾನ್ ರೈಲುಗಳು ಸಹಕಾರಿಯಾಗಲಿವೆ ಎಂದರು.

ಸೂಕ್ತ ಸಾಗಾಣಿಕೆ ಸೌಲಭ್ಯವಿದ್ದರೆ ದರ‌ಕುಸಿತ ತಡೆಯಲು ಸಾಧ್ಯ. ಆದ್ದರಿಂದ ಇಂತಹ ಮಾರ್ಗದ ಅಗತ್ಯವಿದೆ. ಪ್ರಧಾನಮಂತ್ರಿಗಳಿಗೆ ದೇಶದ ಕೃಷಿಕರ ಪರವಾಗಿ ಅಭಿನಂದನೆ‌ ಸಲ್ಲಿಸಿದರು.
ರೈತರ ಆದಾಯ ದ್ವಿಗುಣಗೊಳಿಸಲು ರೈಲ್ವೆ ಇಲಾಖೆಯ ಪಾತ್ರ ಕೂಡ ಮಹತ್ವದ್ದಾಗಿರಲಿದೆ.

ರೈತರ ಅತ್ಯಂತ ಅವಶ್ಯಕತೆಗೆ ಭಾರತ ಸರ್ಕಾರ‌ ಮೂರ್ತ ರೂಪ ನೀಡಿದೆ.
ಕೃಷಿ ಉತ್ಪನ್ನಗಳನ್ನು ಸುಗಮವಾಗಿ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ಕಿಸಾನ್ ರೈಲು ಆರಂಭಿಸಲಾಗಿದೆ.
ರೈತರ ಅನುಕೂಲಕ್ಕಾಗಿ ವಿಶೇಷ ಕಿಸಾನ್ ರೈಲು ಆರಂಭಿಸುವ ಮೂಲಕ ರೈಲ್ವೆ ಇಲಾಖೆ ರೈತರ ಅಭಿವೃದ್ಧಿಗೆ ಕೈಜೋಡಿಸಿದೆ ಎಂದು‌ ಕೃಷಿ ಸಚಿವ ತೋಮರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ರೈಲ್ವೆ ಇಲಾಖೆಯ ಸಚಿವ ಪಿಯುಷ್ ಗೋಯಲ್, ಮೊದಲ ಕಿಸಾನ್ ರೈಲು ಪೈಲಟ್ ಯೋಜನೆಯಾಗಿದೆ. ಪ್ರಧಾನ ಮಂತ್ರಿಗಳ ಕನಸಿನ ಯೋಜನೆಗೆ ಇಂದು ಚಾಲನೆ ದೊರೆತಿದೆ.
ದೇಶದ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಮುಂದಾಗಿದೆ. ದೇಶದ ಪ್ರಗತಿಯ ಎಂಜಿನ್ ರೈಲ್ವೆ ಇಲಾಖೆ ಆಗಬೇಕು ಎಂಬುದು ಪ್ರಧಾನಮಂತ್ರಿಗಳ ಆಶಯವಾಗಿದೆ ಎಂದರು.

ದೇಶದ ಮೂಲೆ‌ಮೂಲೆಗಳಿಗೆ ಕೃಷಿ ಉತ್ಪನ್ನಗಳ ಸುಗಮ ಸಾಗಾಣಿಕೆಗೆ ಅನುಕೂಲ ಕಲ್ಪಿಸಲು ಸಾಧ್ಯವಾಗಲಿದೆ. ಇದರಿಂದ ದೇಶದ ರೈತ ಸಮುದಾಯ ಸ್ವಾವಲಂಬಿಯಾಗುವುದರ ಜತೆಗೆ ದೇಶದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಸಚಿವ ಗೋಯಲ್ ಹೇಳಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಿಸಾನ್ ರೈಲು ಮೂಲಕ ಕೃಷಿ ಉತ್ಪನ್ನಗಳು ಎಲ್ಲೆಡೆ ತಲುಪಿಸುವುದು ನಮ್ಮ ಆಶಯವಾಗಿದೆ ಎಂದು ಗೋಯಲ್ ತಿಳಿಸಿದರು.

ರಾಜ್ಯ ಪ್ರಸ್ತಾವ ಸಲ್ಲಿಸಿದರೆ ಪರಿಶೀಲನೆ:

ಕಿಸಾನ್ ರೈಲು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ನಂತರ ಮಾತನಾಡಿ, ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದರೆ ಇಲ್ಲಿಂದಲೂ ಕಿಸಾನ್ ರೈಲು ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಮಾನ್ಯ ಪ್ರಧಾನಮಂತ್ರಿಗಳು ನೀಡಿದ ಭರವಸೆಯಂತೆ ದೇವಲಾಲಿ-ದಾನಾಪುರ ನಡುವೆ ಕಿಸಾನ್ ರೈಲು ಆರಂಭಿಸಲಾಗಿದೆ.
ಪ್ರತಿ ಭಾನುವಾರ ಸಂಚರಿಸಲಿದೆ. ರೈತರ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದೆ. ರೈತರಿಗೆ ಇದೊಂದು ವರದಾನವಾಗಿದೆ.
ಮಹಾರಾಷ್ಟ್ರದ ದೇವಲಾಲಪುರದಿಂದ ಬಿಹಾರದ ದಾನಾಪುರಗೆ ಮೊದಲ ಕಿಸಾನ್ ರೈಲು ಸಂಚರಿಸಲಿದೆ ಎಂದು ತಿಳಿಸಿದರು.

ನಾಸಿಕ್ ಜಿಲ್ಲೆಯು ಅತೀ ಹೆಚ್ಚು ತರಕಾರಿ, ಹಣ್ಣು ಸೇರಿದಂತೆ ಕೃಷಿ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ರೈಲು ಸೌಲಭ್ಯ ಕಲ್ಪಿಸಿರುವುದರಿಂದ ಉತ್ತಮ ದರ ಲಭಿಸಲಿದ್ದು, ಇದರಿಂದ ರೈತರ ಆತ್ಮಹತ್ಯೆಗೆ ಕಡಿವಾಣ ಬೀಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ನಾಸಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಛಗಬ್ ಭುಜಬಲ್ ಅಭಿಪ್ರಾಯಪಟ್ಟರು.
ಕೃಷಿಕರಿಗೆ ಅವರ ಉತ್ಪನ್ನಗಳಿಗೆ ಉತ್ತಮ ದರ ಒದಗಿಸುವ ನಿಟ್ಟಿನಲ್ಲಿ ಕಿಸಾನ್ ರೈಲು ಸಹಕಾರಿಯಾಗಲಿದೆ ಎಂದರು.

ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕರಾದ ದೇವೇಂದ್ರ ಫಡಣವೀಸ್ ಮಾತನಾಡಿ, ದೇಶದ ಕೃಷಿಕರ ಹಿತರಕ್ಷಣೆಗೆ ಬದ್ಧವಾಗಿರುವ ಪ್ರಧಾನಮಂತ್ರಿಗಳು ಕಿಸಾನ್ ರೈಲು ಒದಗಿಸುವ ಮೂಲಕ ಭರವಸೆ ಈಡೇರಿಸಿದ್ದಾರೆ.
ಶಿಥಲೀಕರಣ ಘಟಕ ಹಾಗೂ ಸೂಕ್ತ ಸಾಗಾಣಿಕೆ ವ್ಯವಸ್ಥೆ ಇಲ್ಲದಿರುವುದರಿಂದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರಕುತ್ತಿರಲಿಲ್ಲ. ಕಿಸಾನ್ ರೈಲು ಸೌಲಭ್ಯದಿಂದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆತು ರೈತರಿಗೆ ಅನುಕೂಲವಾಗಲಿದೆ ಎಂದರು.

ರೈಲ್ವೆ ಇಲಾಖೆಯ ಪಿಯುಷ್ ಗೋಯಲ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ರಾಜ್ಯ ಮಂತ್ರಿ ಕೈಲಾಶ್ ಚೌಧರಿ, ದೇವೇಂದ್ರ ಫಡಣವೀಸ್, ಛಗನ್ ಭುಜಬಲ್, ಸಂಸದರಾದ ಭಾರತಿ ಪವಾರ್, ಹೇಮಂತ್ ಗೋಡ್ಸೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ಕೇಂದ್ರ ರೈಲ್ವೆ ಸಂಜೀವ್ ಮಿತ್ತಲ್ ಸ್ವಾಗತಿಸಿದರು.
***

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *