Breaking News
Home / Breaking News / ಎಂಇಎಸ್‌ಗೆ ಬಿಗ್ ಶಾಕ್ ಕೊಟ್ಟ‌ ಬೆಳಗಾವಿ ಡಿಸಿ ಡಾ. ನಿತೇಶ ಪಾಟೀಲ..!

ಎಂಇಎಸ್‌ಗೆ ಬಿಗ್ ಶಾಕ್ ಕೊಟ್ಟ‌ ಬೆಳಗಾವಿ ಡಿಸಿ ಡಾ. ನಿತೇಶ ಪಾಟೀಲ..!

ಬೆಳಗಾವಿ: ಮಹಾತ್ಮಫುಲೆ ಆರೋಗ್ಯ ಯೋಜನೆ ಕರ್ನಾಟಕದಲ್ಲಿ ಜಾರಿಗೊಳಿಸಲು ಮಹಾರಾಷ್ಟ್ರ ಪ್ಲ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದಿಂದ ವಿವಾದಾತ್ಮಕ ನಿರ್ಣಯಕ್ಕೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಜಿಪಂ ಸಭಾಭವನದಲ್ಲಿ
ಬೆಳಗಾವಿ ಡಿಸಿ ನಿತೇಶ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರ ನಿರ್ಣಯ ಖಂಡಿಸಿದರು. ಕರ್ನಾಟಕದಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ಯೋಜನೆ ಜಾರಿಗೊಳಿಸುತ್ತಿದೆ.ಮರಾಠಿ ಭಾಷಿಕರನ್ನು ಪ್ರಚೋದಿಸಲು ಚಂದಗಡದಲ್ಲಿ ಕಚೇರಿ ಸ್ಥಾಪಿಸುತ್ತಿದೆ.ಗಡಿ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ಸಚಿವರು, ಓರ್ವ ಸಂಸದರನ್ನು ಮಹಾರಾಷ್ಟ್ರ ನೇಮಿಸಿದೆ.ನಮ್ಮ ಸರ್ಕಾರ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ.ಗಡಿ ಅಭಿವೃದ್ಧಿ ಪ್ರಾಧಿಕಾರ, ಸಂರಕ್ಷಣಾ ಆಯೋಗ ಇದ್ದು ಇಲ್ಲದಂತಾಗಿದೆ.ತಕ್ಷಣವೇ ಸಿಎಂ ಗಮನ ಸೆಳೆಯುವಂತೆ ಕನ್ನಡ ಪರ ಸಂಘಟನೆಗಳು‌ ಮನವಿ ಮಾಡಿದರು.ಬೆಳಗಾವಿ ಡಿಸಿ ಡಾ. ನಿತೇಶ ಪಾಟೀಲ ಮೂಲಕ ಸಿಎಂ ‌ಸಿದ್ದರಾಮಯ್ಯಗೆ ಮನವಿ ಮಾಡಿದರು.

ನಾಡದ್ರೋಹಿ ಎಂಇಎಸ್‌ಗೆ ಬಿಗ್ ಶಾಕ್ ಕೊಟ್ಟ‌ ಬೆಳಗಾವಿ ಡಿಸಿ ಡಾ. ನಿತೇಶ ಪಾಟೀಲ ಈ ಸಲವೂ ಕರಾಳ ಆಚರಣೆಗೆ ಅವಕಾಶ ಇಲ್ಲ ಎಂದು ಘೋಷಣೆ ಮಾಡಿದರು.

ಬೆಳಗಾವಿ ಜಿಪಂ ಸಭಾ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಡಿಸಿ ಘೋಷಣೆಗೆ ಚಪ್ಪಾಳೆ ತಟ್ಟಿ ಕನ್ನಡಪರ ಸಂಘಟನೆಗಳು ಸ್ವಾಗತಿಸಿದರು.ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಿಸುತ್ತಿದ್ದ ನಾಡದ್ರೋಹಿ ‌ಎಂಇಎಸ್, ಕಳೆದ ವರ್ಷವೂ ಕರಾಳ ದಿನ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿತು. ಕನ್ನಡಿಗರ ವಿರುದ್ಧ ಮರಾಠಿ ಭಾಷಿಕರನ್ನು ಎತ್ತಿಕಟ್ಟುವ ಮಹಾರಾಷ್ಟ್ರ ಹುನ್ನಾರ ಇದ್ದು ಮಹಾರಾಷ್ಟ್ರ ಹುನ್ನಾರ ಮಧ್ಯೆಯೇ ಗಟ್ಟಿ ನಿರ್ಧಾರ ತೆಗೆದುಕೊಂಡು ಬೆಳಗಾವಿ ಡಿಸಿ ನಿತೇಶ ಪಾಟೀಲ ಕನ್ನಡ ಪ್ರೇಮ ಮೆರೆದಿದ್ದಾರೆ.

ಅದ್ದೂರಿ ಕನ್ನಡ ರಾಜ್ಯೋತ್ಸವ- ಸಿದ್ಧತೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

ಕನ್ನಡಪರ ಸಂಘಟನೆಗಳ ಒಕ್ಕೊರಲಿನ ಒತ್ತಾಯದಂತೆ ಈ ಬಾರಿ ಕೂಡ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುವುದು. ಇದಕ್ಕಾಗಿ ಒಂದು‌ ಕೋಟಿ ರೂಪಾಯಿ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ರಾಜ್ಯೋತ್ಸವ ಆಚರಿಸುವ ಕುರಿತು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಅ.12) ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ವರ್ಷ ಸುಮಾರು ಐದು ಲಕ್ಷ ಜನರು ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.‌ ಈ ಬಾರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ದಸರಾ ಉತ್ಸವ ಮಾದರಿಯಲ್ಲಿ ಅತೀ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕನ್ನಡ ಪರ ಹೋರಾಟಗಾರರು-ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನ:

ರಾಜ್ಯೋತ್ಸವ ಸಂದರ್ಭದಲ್ಲಿ ಐದು ಜನ ಕನ್ನಡಪರ ಹೋರಾಟಗಾರರು ಹಾಗೂ 5 ಜನ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು.

ಸನ್ಮಾನಿತರ ಆಯ್ಕೆಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗುವುದು.

ಅಗತ್ಯ ಸಿದ್ಧತೆಗೆ ಸೂಚನೆ:

ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಗುವುದು.
ಪೊಲೀಸ್ ಇಲಾಖೆ, ಎನ್.ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಗೃಹರಕ್ಷಕ ದಳದ ಸಿಬ್ಬಂದಿ, ಭಾರತ ಸೇವಾ ದಳ ಪರೇಡ್ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ರಾಜ್ಯೋತ್ಸವ ಆಚರಣೆಗೆ ವೇದಿಕೆ, ಆಸನ ವ್ಯವಸ್ಥೆ, ದೀಪಾಲಂಕಾರ, ಮೈಕ್, ಸೂಕ್ತ ಪೊಲೀಸ್ ಬಂದೋಬಸ್ತ್, ಕವಾಯತು ನಂತರ ಅಲ್ಪೋಪಹಾರ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಮೆರವಣಿಗೆಯ ರೂಪಕ ವಾಹನಗಳು, ಕೋಲಾಟ, ಡೊಳ್ಳಿನ ಮೇಳ ಸೇರಿದಂತೆ ಇತರೆ ಕಾರ್ಯಕ್ರಮ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಕನ್ನಡ ಫಲಕಗಳು ಕಡ್ಡಾಯ:

ರಾಜ್ಯೋತ್ಸವ ಆಚರಣೆ ಹೆಚ್ಚಿನ ಅನುದಾನ ನೀಡಲು ಸರ್ಕಾರಕ್ಕೆ ನಿರಂತರ ಮನವಿಗಳನ್ನು ಸಲ್ಲಿಸಲಾಗುತ್ತಿದೆ. ಅದಕ್ಕೆ ಈವರೆಗೆ ಸ್ಪಂದನೆ ಸಿಗುತ್ತಿಲ್ಲ.
ನಗರದ ಚನ್ನಮ್ಮ ಸರ್ಕಲ್, ಕನ್ನಡ ಸಾಹಿತ್ಯ ಭವನ ಹತ್ತಿರದಲ್ಲಿ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಇಂಗ್ಲಿಷ್ ಫಲಕಗಳಿವೆ. ನಗರದ ಯಾವುದೇ ಒಂದು ಸ್ಥಳದಲ್ಲಿಯೂ ಕನ್ನಡ ಫಲಕಗಳಿಲ್ಲ. ಇಂತಹ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಬಾರದು ಎಂದು ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರು ಸಭೆಯಲ್ಲಿ ಒತ್ತಾಯಿಸಿದರು.

ಜಿಲ್ಲೆಯ ವಿವಿಧೆಡೆಯಿಂದ ಬರುವ ಜನರಿಗೆ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ, ಕುಟುಂಬ ಪರಿವಾರದೊಡನೆ ಜನರಿಗೆ ನಗರದ ಆಸನದ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಬಾರಿ ಅನುದಾನ ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿದೆ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ ಕೂಡಲೇ ಜಿಲ್ಲಾಡಳಿತ ಈ ಕುರಿತು ಸರ್ಕಾರದ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಪತ್ರಿಕಾಭವನ ನಿರ್ಮಾಣಕ್ಕೆ ಒತ್ತಾಯ:

ಕನ್ನಡ ಸಂಘಟನೆಗಳ ಜೊತೆಗೆ ಪತ್ರಕರ್ತರು ನಿರಂತರ ಕನ್ನಡ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಕರ್ತರಿಗೆ ಸ್ಥಳ ಇಲ್ಲದೆ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ವರದಿ ಮಾಡುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಮಹಾದೇವ ತಳವಾರ ಅವರು ಹೇಳಿದರು.

ರಾಜ್ಯೋತ್ಸವ ವೀಕ್ಷಣೆಗೆ ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ಚನ್ನಮ್ಮ ವೃತ್ತದಲ್ಲಿ ಬಳಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ವೇದಿಕೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಪೂರ್ವ ಸಿದ್ಧತೆಗಳ ಕುರಿತು ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳು ಪೂರೈಸಿವೆ. ಆದಕಾರಣ 50 ವರ್ಷಗಳ ಸಂಭ್ರಮಾಚರಣೆ ಅದ್ದೂರಿಯಾಗಿರಬೇಕು. ಪೌರಕಾರ್ಮಿಕರು, ಪೊಲೀಸ್ ಇಲಾಖೆ ಸಿಬ್ಬಂದಿಗಳ ಸೇವೆ ಶ್ಲಾಘನಿಯ ರಾಜ್ಯೋತ್ಸವ ದಿನ ಅವರನ್ನೂ ಸನ್ಮಾನಿಸಬೇಕು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳನ್ನು ಹಳದಿ ಕೆಂಪು ಬಣ್ಣದ ದೀಪಾಲಂಕಾರ ಮಾಡಬೇಕು ಎಂದು ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಅವರು ಮನವಿ ಮಾಡಿಕೊಂಡರು.

ರಾಜ್ಯೋತ್ಸವ ಆಚರಣೆಗಾಗಿ 1 ಕೋಟಿ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅನುದಾನ ಬಂದಲ್ಲಿ ಇನ್ನೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಚನ್ನಮ್ಮ ವೃತ್ತದ ಅಗಲೀಕರಣಕ್ಕೆ ಮನವಿ:

ನಗರದ ಚನ್ನಮ್ಮ ವೃತ್ತದ ಸುತ್ತಮುತ್ತ ಕಿರು ಕೋಟೆ ನಿರ್ಮಾಣ ಮಾಡಬೇಕು ಎಂದು ಕನ್ನಡಪರ ಹೋರಾಟಗಾರ್ತಿ ಕಸ್ತೂರಿ ಬಾಯಿ ಅವರು ಮನವಿ ಮಾಡಿಕೊಂಡರು.
ಇದೇ ವೇಳೆ ನಗರದ ಚನ್ನಮ್ಮ ವೃತ್ತದ ಅಗಲೀಕರಣ, ಮೂರ್ತಿ ಎತ್ತರ ಹಾಗೂ ಮೂರ್ತಿಯ ಸುತ್ತ ಮುತ್ತ ಕಬ್ಬಿಣ ಸರಪಳಿ ವ್ಯವಸ್ಥೆ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ಭಾವಕಣ್ಣಾ ಬಂಕ್ಯಾಗೋಳ ಅವರು ಮನವಿ ಸಲ್ಲಿಸಿದರು.

ಕನ್ನಡಪರ ಹೋರಾಟಗಳಲ್ಲಿ ಈಗಾಗಲೇ ಎಫ್.ಐ.ಆರ್ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ವಾಲ್ಮೀಕಿ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಶಿಗಿಹಳ್ಳಿ ಮನವಿ ಮಾಡಿಕೊಂಡರು.

ಗಡಿ ವಿವಾದಗಳ ಪರಿಹಾರಕ್ಕೆ ಕ್ರಮ ವಹಿಸಲು ಒತ್ತಾಯ:

ಕರ್ನಾಟಕದ ಗಡಿ ವಿವಾದಗಳು ಪದೇ ಪದೇ ಕೇಳಿ ಬರುತ್ತಿದ್ದು, ಬೆಳಗಾವಿಯಲ್ಲಿ ಯಾವುದೇ ಸ್ಥಳಗಳಲ್ಲಿ ಕರಾಳ ದಿನಾಚರಣೆ ನಡೆಸಲು ಜಿಲ್ಲಾಡಳಿತ ಅನುಮತಿ ಕೊಡಬಾರದು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಕಳೆದ ಒಂದು ವರ್ಷದಲ್ಲಿ ಕೈಕೊಳ್ಳುತ್ತಿರುವ ಆಕ್ರಮಣಕಾರಿ ಮತ್ತು ಕರ್ನಾಟಕ ವಿರೋಧಿ ನಿಲವುಗಳ ಬಗ್ಗೆ ಕನ್ನಡ ಸಂಘಟನೆಗಳು ಕರ್ನಾಟಕ ಸರಕಾರಕ್ಕೆ ನಿರಂತರ ವರದಿ ಸಲ್ಲಿಸುತ್ತಿವೆ. ಆದರೆ ಸರ್ಕಾರದ ಈ ಸಂಬಂಧ ಯಾವುದೇ ದೃಢ ನಿರ್ಧಾರ ಕೈಗೊಂಡಿಲ್ಲ.

ಕರ್ನಾಟಕದ 5 ಜಿಲ್ಲೆಗಳ 855 ಹಳ್ಳಿ ಪಟ್ಟಣಗಳಲ್ಲಿ ವಾಸಿಸುವ ಮರಾಠಿ ಭಾಷಿಕರಿಗೆ ಅನ್ವಯವಾಗುವಂತೆ ಮಹಾತ್ಮ ಫುಲೇ ಜನಾರೋಗ್ಯ ಯೋಜನೆಯನ್ನು ಜಾರಿಗೊಳಸಲು ಇದೇ ವರ್ಷದ ಮಾರ್ಚ ತಿಂಗಳಲ್ಲಿ ಮಹಾರಾಷ್ಟ್ರ ಸರಕಾರ ನಿರ್ಧಾರ ಕೈಕೊಂಡಿದೆ. ಈ ನಿರ್ಧಾರದಿಂದ ಮಹಾರಾಷ್ಟ್ರವು ಕರ್ನಾಟಕದ ಆಡಳಿತದಲ್ಲಿ ನೇರವಾಗಿ, ಹಸ್ತಕ್ಷೇಪ ಮಾಡಿದೆ ಇದನ್ನು ತಡೆಯಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಕರವೇ ಕನ್ನಡಪರ ಹೋರಾಟಗಾರ ಮಹಾದೇವ ತಳವಾರ ಹಾಗೂ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ಸಭೆ ಆರಂಭಕ್ಕೂ ಮುಂಚೆ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನವೆಂಬರ್ 1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಲ್ ಭೋಯರ್, ಡಿಸಿಪಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ,
ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ,
ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾದ ಅಶೋಕ್ ಚಂದರಗಿ, ಕರವೇ ಕರವೇ ರಾಜ್ಯ ಸಂಚಾಲಕರಾದ (ರೈತ ಸಂಘಟನೆ) ಸುರೇಶ್ ಗವನ್ನವರ, ಕನ್ನಡಪರ ಹೋರಾಟ ಮೈನುದ್ದಿನ್ ಮಕಾನದಾರ, ಯಲ್ಲಪ್ಪ ಹುದಲಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
***

Check Also

ದ ಮೇಕರ್ ಆಫ್ ನ್ಯೂ ಇಂಡಿಯಾ ಪುಸ್ತಕ ರೆಡಿ ಮಾಡಿದವರು ಯಾರು ಗೊತ್ತಾ..??

ಪ್ರಾಮಿಸ್ಡ್ ನೇಷನ್’ ಪ್ರಧಾನಿಗೆ ಅರ್ಪಣೆ * ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ ಬೆಂಗಳೂರು ದೇಶದ ಏಳು …

Leave a Reply

Your email address will not be published. Required fields are marked *