Breaking News
Home / Breaking News / ಸೈನಿಕ ಹಾಗೂ ಪೊಲೀಸ್ ತರಬೇತಿ ಕೇಂದ್ರ ಯಮಕನಮರಡಿಯಲ್ಲಿ ಸ್ಥಾಪನೆ ಮಾಡ್ತಾರಂತೆ…

ಸೈನಿಕ ಹಾಗೂ ಪೊಲೀಸ್ ತರಬೇತಿ ಕೇಂದ್ರ ಯಮಕನಮರಡಿಯಲ್ಲಿ ಸ್ಥಾಪನೆ ಮಾಡ್ತಾರಂತೆ…

ಘಟಪ್ರಭ ಸೇವಾದಳದಲ್ಲಿ ತರಬೇತಿ ಪಡೆದು ಸೇನೆ, ಪೊಲೀಸ್ ಇಲಾಖೆಗೆ ಆಯ್ಕೆಯಾದರೆ ನಮ್ಮ ಶ್ರಮ ಸಾರ್ಥಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಬೆಳಗಾವಿ: ಗ್ರಾಮೀಣ, ಬಡ ಮತ್ತು ಶೋಷಿತ ಸಮುದಾಯದ ಆಕಾಂಕ್ಷಿಗಳಿಗೆ 100 ಜನ ಸಾಮರ್ಥ್ಯದ ಪೂರ್ಣ ಪ್ರಮಾಣದ ಸೈನಿಕ ಹಾಗೂ ಪೊಲೀಸ್ ತರಬೇತಿ ಕೇಂದ್ರವನ್ನು ಯಮಕನಮರಡಿಯಲ್ಲಿ ನಿರ್ಮಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಕಾಂಗ್ರೆಸ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಸೈನಿಕರು ಮತ್ತು ಪೊಲೀಸ್ ಪೇದೆ ಆಕಾಂಕ್ಷಿಗಳಿಗೆ ನಡೆಯುತ್ತಿರುವ ಉಚಿತ ತರಬೇತಿ ಶಿಬಿರದಲ್ಲಿ ಆಕಾಂಕ್ಷಿಗಳನ್ನು ಉದ್ದೇಶಿಸಿ ಅವರು ಮಾತಾಡಿದರು.

ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತೆ ನಿಮಗೆ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಘಟಪ್ರಭದ ಸೇವಾದಳದಲ್ಲಿ ತರಬೇತಿ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಮತ್ತು ಪೊಲೀಸ್ ಇಲಾಖೆಗೆ ಆಯ್ಕೆಯಾದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.

“ಪ್ರಯತ್ನ ನಿಮ್ಮದು ಪ್ರೋತ್ಸಾಹ ನಮ್ಮದು” ಎಂಬ ಘೋಷವಾಕ್ಯದಡಿ ನಾವು ಕೆಲಸ ಮಾಡುತ್ತಿದ್ದೇವೆ. ಬೇರೆಯವರಂತೆ ನಾವು ಅನವಶ್ಯಕವಾಗಿ ಖರ್ಚು ಮಾಡುವುದಿಲ್ಲ. ಅದರ ಬದಲಾಗಿ ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಅವಾರ್ಡ್ ಗಳನ್ನು, ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತದೆ. ಇದೀಗ ಸೈನಿಕರು ಮತ್ತು ಪೊಲೀಸ್ ಪೇದೆ ಆಕಾಂಕ್ಷಿಗಳಿಗೆ ತರಬೇತಿ ನಡೆಯುತ್ತಿದೆ. ಇಂತಹ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚು ಮಾಡುತ್ತೇವೆ. ನಿಮಗೆ ಅಗತ್ಯವಾದ ತರಬೇತಿ ಮತ್ತು ಇತರ ಸೇವೆಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮಾನವ ಬಂಧುತ್ವ ವೇದಿಕೆಯ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಪರಸರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮೂಢ ನಂಬಿಕೆ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಮೊಟ್ಟ ಮೊದಲು ಮಹಿಳೆಯರಿಗೆ ಅವಕಾಶವನ್ನು ಕೊಟ್ಟವರು ಬಸವಣ್ಣ. ಅವರ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿದರು ಎಂದರು.

ನಮ್ಮ ದೇಶದ ಜನ ಅನಗತ್ಯವಾಗಿ ತಾವು ದುಡಿದ ಹಣವನ್ನು ಕರ್ಚು ಮಾಡುತ್ತಾರೆ. ಅದರ ಬದಲಿಗೆ ತಮ್ಮ ವೈಯಕ್ತಿಕ ಅಭಿವೃದ್ಧಿಗೆ ಹಣ ಖರ್ಚು ಮಾಡುವುದನ್ನು ಕಲಿಯಬೇಕು. ಇದರಿಂದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕವಾಗಿ ಜನರ ಅಭಿವೃದ್ಧಿ ಸಾಧ್ಯ ಎಂದರು.

ಸಭೆಯಲ್ಲಿ ಮಾತಾಡಿದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಸೈನಿಕರು ಮತ್ತು ಪೊಲೀಸ್ ಪೇದೆ ಆಕಾಂಕ್ಷಿಗಳಿಗೆ ನೀಡುತ್ತಿರುವ ಉಚಿತ ತರಬೇತಿ ಮೂಲಕ ಸತೀಶ್ ಜಾರಕಿಹೊಳಿಯವರ ಬಹಳ ಹಳೆಯ ಕನಸು ನನಸಾದಂತಾಗಿದೆ ಎಂದರು.

ಕೆಲವು ವರ್ಷಗಳ ಹಿಂದೆ ಸತೀಶ್ ಜಾರಕಿಹೊಳಿಯವರ ಬಳಿ ಚರ್ಚಿಸುತ್ತಿರುವಾಗ ಮೆಡಿಕಲ್ ಕಾಲೇಜು ತೆರೆಯಬೇಕು ಎಂದು ಅಭಿಪ್ರಾಯ ಪಟ್ಟಿದ್ದೆ. ಆಗ ಅವರು, ಅದರಲ್ಲಿ ನಿಮ್ಮ ಸುತ್ತಮುತ್ತಲಿನ ಜನ ಎಷ್ಟು ಜನ ಓದುತ್ತಾರೆ ಎಂದು ಕೇಳಿದ್ದರು. ಜೊತೆಗೆ ದಮನಿತ ಸಮುದಾಯದವರಿಗೆ ಉದ್ಯೋಗ ನೀಡುವ ತರಬೇತಿ ಸಂಸ್ಥೆಯನ್ನು ತೆರೆಯಬೇಕು ಎಂದು ಹೇಳಿದ್ದರು. ಇದೀಗ ಆ ಕೆಲಸ ನಡೆಯುತ್ತಿರುವುದು ನಮಗೆಲ್ಲ ಸಂತಸದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಮಾತಾಡಿದ ಜೈಜವಾನ್ ಕೋಚಿಂಗ್ ಸೆಂಟರ್ ತರಬೇತಿದಾರ ಸಂತೋಷ್ ಮೆಳವಂಕಿ, ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಉಚಿತ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಜೈ ಜವಾನ್ ಕೋಚಿಂಗ್ ಸೆಂಟರ್ ಘಟಪ್ರಭದ ತರಬೇತಿದಾರ ಹನುಮಂತ ನಂದಿ ಮಾತನಾಡಿ, ಉಚಿತ ತರಬೇತಿಯ ಸದುಪಯೋಗವನ್ನು ಸೈನಿಕ ಮತ್ತು ಪೊಲೀಸ್ ಪೇದೆ ಹುದ್ದೆ ಆಕಾಂಕ್ಷಿಗಳು ಪಡೆಯಬೇಕು. ಇಂತಹ ಕಾರ್ಯ ಮಾಡುತ್ತಿರುವ ಸತೀಶ್ ಜಾರಕಿಹೊಳಿ ಫೌಂಡೇಷನ್ ನಡೆ ಶ್ಲಾಘನೀಯ ಎಂದರು.

ತರಬೇತಿ ಶಿಬಿರದಲ್ಲಿ ದೈಹಿಕ ತರಬೇತಿ ನೀಡುತ್ತಿರುವ ನಿವೃತ್ತ ಸೈನಿಕ ಸುಭಾಷ್ ನಾಯಕ್ ಮಾತನಾಡಿ, ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ತರಬೇತಿ ಅತ್ಯುತ್ತಮವಾಗಿದೆ. ಇಂತಹ ಅವಕಾಶ ನಮಗೆ ಕೂಡ ಸಿಕ್ಕಿರಲಿಲ್ಲ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತಾಡಿದ ತರಬೇತಿಯಲ್ಲಿ ಭಾಗವಹಿಸಿರುವ ಆಕಾಂಕ್ಷಿಗಳು, ತರಬೇತಿಯಲ್ಲಿ ನಮಗೆ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆಯಲ್ಲಿ ನಾವು ಚಾಪೆ ಮೇಲೆ ಮಲಗುತ್ತಿದ್ದೆವು. ಇಲ್ಲಿ ನಮಗೆ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆಯಲ್ಲಿ ಕೂಡ ಸಿಗದಂತಹ ಉಪಾಹಾರ, ಊಟ ಮತ್ತು ಇತರ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಗೆ ಧನ್ಯವಾದಗಳನ್ನು ಸಲ್ಲಿಸಬೇಕು ಎಂದರು.

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *