Breaking News
Home / Breaking News / ಜಿಲ್ಲಾ ಮಾಡ್ರಿ ಎಂದು, ಮಿನಿಸ್ಟರ್ ಭೇಟಿಯಾದ ಹೊಂಗಲ್ ಮಂದಿ…!!

ಜಿಲ್ಲಾ ಮಾಡ್ರಿ ಎಂದು, ಮಿನಿಸ್ಟರ್ ಭೇಟಿಯಾದ ಹೊಂಗಲ್ ಮಂದಿ…!!

ಮತ್ತೆ ಮೊಳಕೆಯೊಡೆದ ಬೆಳಗಾವಿ ಜಿಲ್ಲೆ ವಿಭಜನೆ ಕೂಗು

ಬೆಳಗಾವಿ-ಬೈಲಹೊಂಗಲ ಜಿಲ್ಲೆಗೆ ಆಗ್ರಹಿಸಿ ಸಚಿವ ಉಮೇಶ ಕತ್ತಿ ಭೇಟಿಯಾದ ಬೈಲಹೊಂಗಲ ಸರ್ವಪಕ್ಷ ನಿಯೋಗ

ಬೆಳಗಾವಿ: ಈ ಹಿಂದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಬೇಡಿಕೆ ಇಟ್ಟಿದ್ದ ಅರಣ್ಯ ಮತ್ತು ಆಹಾರ ನಾಗರಿಕ ಸರಬರಾಜು ಖಾತೆ ಸಚಿವ ಉಮೇಶ ಕತ್ತಿ ಈಗ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದ್ದಾರೆ.

ಈ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ, ಜಿಲ್ಲಾ ವಿಭಜನೆ ಹೋರಾಟದ ಮುಂದಾಳತ್ವವನ್ನು ವಹಿಸುವುದಾಗಿ ಅವರು ಹೇಳಿದ್ದಾರೆ.ಮಬೆಳಗಾವಿ ಜಿಲ್ಲಾ ವಿಭಜನೆ ಕೂಗು ಮತ್ತೆ ಮೊಳಕೆಯೊಡೆದಿದ್ದು, ಅಚ್ಚರಿ ಬೆಳವಣಿಗೆಯೊಂದರಲ್ಲಿ ಬೈಲಹೊಂಗಲದ ಮಠಾಧೀಶರು, ವಿವಿಧ ರಾಜಕೀಯ ನಾಯಕರು ಪಕ್ಷಾತೀತರಾಗಿ ಅರಣ್ಯ ಸಚಿವ ಉಮೇಶ ಕತ್ತಿ ಅವರನ್ನು ಭೇಟಿಯಾಗಿ ಬೈಲಹೊಂಗಲ ಜಿಲ್ಲೆಯನ್ನಾಗಿಸುವಂತೆ ಮನವಿ ಮಾಡಿದ್ದಾರೆ.

ಸಂಕೇಶ್ವರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಉಮೇಶ ಕತ್ತಿ ಅವರನ್ನು ಭೇಟಿಯಾದ ಬೈಲಹೊಂಗಲದ ಸರ್ವಪಕ್ಷಗಳ ನಿಯೋಗ, ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ, ಚಿಕ್ಕೋಡಿ ಮತ್ತು ಬೈಲಹೊಂಗಲನ್ನು ಜಿಲ್ಲೆಯನ್ನಾಗಿಸುವಂತೆ ಒತ್ತಾಯಿಸಿದರು. ವಿವಿಧ ಮಠಾಧೀಶರು, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಈ ನಿಯೋಗದಲ್ಲಿದ್ದರು.

ಚಿಕ್ಕೋಡಿ ಮತ್ತು ಗೋಕಾಕದಲ್ಲಿ ಮಾತ್ರ ಈವರೆಗೆ ಜಿಲ್ಲೆ ವಿಭಜನೆ ಕೂಗು ಕೇಳಿಬರುತ್ತಿತ್ತು. ಆದರೆ, ಈ ಬಾರಿ ಬೈಲಹೊಂಗಲ ಭಾಗದ ಜನತೆ ಜಿಲ್ಲೆ ವಿಭಜನೆಗೆ ಕೂಗು ಎತ್ತಿದ್ದಾರೆ.ಬೈಲಹೊಂಗಲ ಸರ್ವಪಕ್ಷಗಳ ನಿಯೋಗದ ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉಮೇಶ ಕತ್ತಿ, ಅಭಿವೃದ್ಧಿ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆಯನ್ನಾಗಿ ಘೋಷಿಸಬೇಕು. ಅಖಂಡ ಧಾರವಾಡ ಜಿಲ್ಲೆಯನ್ನು ವಿಭಜಿಸಿ ಹಾವೇರಿ, ಗದಗ ಜಿಲ್ಲೆಯನ್ನು ರಚನೆ ಮಾಡಿದಂತೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಮೂರು ಜಿಲ್ಲೆಗಳನ್ನಾಗಿಸಬೇಕು. ಮೂರು ಜಿಲ್ಲೆಯಾದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಈ ಸಂಬಂಧ ಈಗಾಗಲೇ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಯನ್ನು ಭೇಟಿಯಾಗಿ ಒತ್ತಾಯಿಸಿದ್ದೇವೆ ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಮುಖ್ಯಮಂತ್ರಿ ಒಲವು ಹೊಂದಿದ್ದಾರೆ ಇಲ್ಲವೋ ನನಗೆ ಗೊತ್ತಿಲ್ಲ. ಅವರ ಮೇಲೆ ಒತ್ತಡ ಹೇರುವುದು ನಮ್ಮ ಕರ್ತವ್ಯ. ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿರುವುದರಿಂದ ಬೇರೆ ಜಿಲ್ಲೆಯಷ್ಟೇ ಇಲ್ಲಿಯೂ ಅನುದಾನ ನೀಡಲಾಗುತ್ತಿದೆ. ಇದು ಅಭಿವೃದ್ಧಿಗೆ ಏತಕ್ಕೂ ಸಾಲುವುದಿಲ್ಲ. ಧಾರವಾಡ, ಹಾವೇರಿ, ಗದಗ ಜಿಲ್ಲೆಗೆ ಪ್ರತ್ಯೇಕವಾಗಿ ₹ ೪೫೦ ಕೋಟಿ ಅನುದಾನ ಬರುತ್ತದೆ. ಅಷ್ಟೇ ಬೆಳಗಾವಿ ಜಿಲ್ಲೆಗೆ ಬರುತ್ತಿದೆ. ಈಗ ಜಿಲ್ಲೆಯ ಜನತೆ ಬೆಳಗಾವಿ ಜಿಲ್ಲೆಯ ವಿಭಜನೆಗೆ ದನಿ ಎತ್ತುತ್ತಿದ್ದಾರೆ ಎಂದು ಅವರು ಹೇಳಿದರು.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *