Breaking News
Home / Breaking News / ಬೆಳಗಾವಿ ಜಿಲ್ಲೆಯ ಮೊಹರಂ ಸ್ಪೇಶ್ಯಾಲಿಟಿ ಏನು ಗೊತ್ತಾ..??

ಬೆಳಗಾವಿ ಜಿಲ್ಲೆಯ ಮೊಹರಂ ಸ್ಪೇಶ್ಯಾಲಿಟಿ ಏನು ಗೊತ್ತಾ..??

ಬೆಳಗಾವಿ; ಇಲ್ಲಿ ಮುಸ್ಲಿಂ ಒಂದೂ ಕುಟುಂಬ ಇಲ್ಲ, ಹಿಂದೂಗಳಿಂದಲೇ ಮೊಹರಂ ಆಚರಣೆ

ಬೆಳಗಾವಿ: ಅದು ಸವದತ್ತಿ ತಾಲ್ಲೂಕಿನ ಚಿಕ್ಕ ಗ್ರಾಮ ಹರ್ಲಾಪುರ. ಆದರೆ, ಧರ್ಮ ಸೌಹಾರ್ದದಲ್ಲಿ ಈ ಜನರ ಮನಸ್ಸು ಬಹಳ ದೊಡ್ಡದು. ಈ ಊರಲ್ಲಿ ಒಂದೂ ಮುಸ್ಲಿಂ ಕುಟುಂಬವಿಲ್ಲ. ಹಾಗಾಗಿ, ಹಿಂದೂಗಳೇ ಇಲ್ಲಿ ಫಕೀರಸ್ವಾಮಿ ದರ್ಗಾ ಕಟ್ಟಿಸಿ, ಮೊಹರಂ ಆಚರಿಸುತ್ತಿದ್ದಾರೆ.
ಮಂಗಳವಾರ ತುಂತುರು ಮಳೆ ಮಧ್ಯೆಯೂ‌ ಮೊಹರಂ ಆಚರಣೆ ನಡೆಯಿತು.

ಇಲ್ಲಿ ಪ್ರತಿ ವರ್ಷ ವೈಭವದಿಂದ ಮೊಹರಂ ಆಚರಿಸಲಾಗುತ್ತದೆ. ಪಂಜಾಗಳನ್ನು ಪ್ರತಿಷ್ಠಾಪನೆ ಮಾಡುವುದು, ಪೂಜೆ, ಡೋಲಿಗಳ ನಿರ್ಮಾಣ ಹಾಗೂ ಅವುಗಳನ್ನು ಮೆರವಣಿಗೆ ಮಾಡಿ ಹೊಳೆಗೆ ಸೇರಿಸುವವರೆಗೆ ಮುಸ್ಲಿಂ ಧರ್ಮದ ಎಲ್ಲ ಆಚರಣೆಗಳನ್ನೂ ಇಲ್ಲಿ ಹಿಂದೂಗಳೇ ಮಾಡುತ್ತಾರೆ.

ಹಿರಿಯರಿಗೆ ಗೊತ್ತಿರುವ ಹಾಗೆ ನಾಲ್ಕು ತಲೆಮಾರುಗಳಿಂದ ಇಲ್ಲಿ ಮೊಹರಂ, ಉರುಸ್‌ ಆಚರಿಸಲಾಗುತ್ತಿದೆ. ದಶಕದ ಹಿಂದೆ ಗುರು– ಹಿರಿಯರು, ಯುವಜನರು ದೇಣಿಗೆ ಸಂಗ್ರಹಿಸಿ, 8ಲಕ್ಷ ವೆಚ್ಚದಲ್ಲಿ ಫಕೀರಸ್ವಾಮಿ ದರ್ಗಾ ನಿರ್ಮಿಸಿದ್ದಾರೆ.

ಈ ದರ್ಗಾದಲ್ಲಿ ಹಿಂದೂ, ಬೌದ್ಧ, ಕ್ರೈಸ್ತ, ವೀರಶೈವ– ಲಿಂಗಾಯತ ಧರ್ಮಗಳ ದೇವರು, ಮಹಾತ್ಮರ ಫೋಟೊಗಳನ್ನೂ ಪೂಜಿಸಲಾಗುತ್ತಿದೆ.
ಮೌಖಿಕ ಇತಿಹಾಸ: ಹಿಂದೆ ಮುಸ್ಲಿಂ ಸಮುದಾಯದ ಫಕೀರರೊಬ್ಬರು ಈ ಊರಿನಲ್ಲಿ ನಾಲ್ಕು ದೇವರ ಮೂರ್ತಿಗಳನ್ನು ಪೂಜೆ ಮಾಡುತ್ತಿದ್ದರು. ಅವರು ನಿಧನರಾದ ನಂತರ ರಾಮಚಂದ್ರ ನಿಂಬಾಳಕರ ಎನ್ನುವವರ ಹೊಲದಲ್ಲಿ ದಫನ್‌ ಮಾಡಲಾಯಿತು. ಅಲ್ಲಿಂದ ಹಿಡಿ ಮಣ್ಣು ತಂದು ಊರಿನ ಮುಖ್ಯಭಾಗದಲ್ಲಿ ಗೋರಿ ಕಟ್ಟಿದರು. 2012ರಲ್ಲಿ ಅದಕ್ಕೆ ಹೊಂದಿಕೊಂಡೇ ದರ್ಗಾ ತಲೆ ಎತ್ತಿದೆ. ಆದರೆ, ಫಕೀರ ಅವರ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ.

ಫಕೀರ ಅವರು ಊರಿನ ಜನರಿಗೆ ಮಾರ್ಗದರ್ಶಿ ಆಗಿದ್ದರು. ಮುಸ್ಲಿಮರಿಗೆ ಫಕೀರ– ಹಿಂದೂಗಳಿಗೆ ಈಶ್ವರ ಎಂದು ಪರಿಗಣಿಸಿ ಅವರಿಗೆ ಫಕೀರೇಶ್ವರ ಎಂದು ಹಿರಿಯರು ಕರೆದಿದ್ದಾರೆ. ದರ್ಗಾ ಪಕ್ಕದಲ್ಲೇ ದೊಡ್ಡ ಬೇವಿನಮರವಿದೆ. ಹಾವು ಕಚ್ಚಿದವರಿಗೆ ಈ ಬೇವಿನ ಮರದ ಎಲೆ ಹಾಗೂ ದರ್ಗಾದ ಪ್ರಸಾದ ಸೇರಿಸಿ ತಿನ್ನಿಸುತ್ತೇವೆ. ತಕ್ಷಣ ವಾಂತಿಯಾಗಿ, ಹಾವು ಕಚ್ಚಿದ ವ್ಯಕ್ತಿ ಪ್ರಾಣ ಉಳಿಯುತ್ತದೆ. ಹಲವು ವರ್ಷಗಳಿಂದ ಈ ನಂಬಿಕೆ ಮುಂದುವರೆದಿದೆ‌.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *