Breaking News
Home / Breaking News / ರಾಣಿ ಚನ್ನಮ್ಮನ ಕಿತ್ತೂರಿಗೆ ಬಂಪರ್ ಕೊಡುಗೆ…

ರಾಣಿ ಚನ್ನಮ್ಮನ ಕಿತ್ತೂರಿಗೆ ಬಂಪರ್ ಕೊಡುಗೆ…

ಬೆಳಗಾವಿ,  ಕಿತ್ತೂರು ಬಳಿ ಇರುವ ಕೆ.ಐ.ಎ.ಡಿ.ಬಿ. ಜಾಗೆಯಲ್ಲಿ 1000 ಎಕರೆ ಕೈಗಾರಿಕಾ ಟೌನ್ ಷಿಪ್ ನಿರ್ಮಿಸಲು ನಿರ್ಧರಿಸಲಾಗಿದೆ. ಶೀಘ್ರ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಸೋಮವಾರ(ಅ.24) ರಾಜ್ಯಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧಾರವಾಡ-ಬೆಳಗಾವಿ ರೈಲುಮಾರ್ಗವನ್ನು ಕಿತ್ತೂರು ಮಾರ್ಗವಾಗಿ ನಿರ್ಮಿಸಲಾಗುವುದು. ಇದಕ್ಕಾಗಿ ಭೂಸ್ವಾ್ಈನ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೃಷ್ಷಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಇನ್ನು ಕೆಲವು ದಿನಗಳಲ್ಲಿ ಸಿಹಿ ಸುದ್ದಿ ಸಿಗಲಿದೆ.
ಇದಲ್ಲದೇ ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಸರಕಾರ ಬದ್ಧವಿದೆ. ಅದು ಕೂಡ ಶೀಘ್ರ ಅನುಷ್ಠಾನಕ್ಕೆ ಕಾಲ ಕೂಡಿ ಬರಲಿದೆ ಎಂದರು.
ಚನ್ನಮ್ಮನ ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬುದು ಮೂಢನಂಬಿಕೆ.‌ ಇದಕ್ಕೆ ಸೆಡ್ಡು ಹೊಡೆದು ಮುಖ್ಯಮಂತ್ರಿ ಯಾಗಿ ಎರಡು ಬಾರಿ ಉತ್ಸವಕ್ಕೆ ಬಂದಿದ್ದೇನೆ ಎಂದರು.

ಸುವರ್ಣ ಸೌಧದ ಆವರಣದಲ್ಲಿ ಅಂಬೇಡ್ಕರ್, ಚನ್ನಮ್ಮ ಪ್ರತಿಮೆ:

ಸುವರ್ಣಸೌಧದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಮುಂದಿನ ತಿಂಗಳು ಅಡಿಗಲ್ಲು ಇಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಅಡಿಗಲ್ಲು ಮಾತ್ರವಲ್ಲ; ನಮ್ಮ ಅವಧಿಯಲ್ಲಿ ಉದ್ಘಾಟನೆ ಕೂಡ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಬೈಲಹೊಂಗಲ ಸ್ಮಾರಕ ಅಭಿವೃದ್ಧಿಗೆ ಎರಡು ಕೋಟಿ ಅನುದಾನವನ್ನು ಪ್ರಾಧಿಕಾರದ ವತಿಯಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕೋಟೆ ಪಕ್ಕದಲ್ಲಿ ಅರಮನೆ ಪ್ರತಿರೂಪ:

ರೈತರ ಮನವೊಲಿಸಿ ಜಮೀನು ಸ್ವಾಧೀನಪಡಿಸಿಕೊಂಡು ಈಗಿರುವ ಚನ್ನಮ್ಮನ ಕೋಟೆಯ ಪಕ್ಕದಲ್ಲೇ ಅರಮನೆಯ ಪ್ರತಿರೂಪ ನಿರ್ಮಿಸಲಾಗುವುದು. ಶಿಥಿಲಾವಾಸ್ಥೆಯಲ್ಲಿರುವ ಕೋಟೆಯ‌ ಜೀರ್ಣೋದ್ಧಾರಕ್ಕೆ 27 ಕೋಟಿ ರೂಪಾಯಿ ಅನುದಾನವನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ತೆಗೆದಿರಿಸಲಾಗಿದೆ ಎಂದರು.

ಏತ ನೀರಾವರಿ ಯೋಜನೆಗೆ 580 ಕೋಟಿ ಅನುದಾನ ನೀಡಲಾಗಿದೆ. ಅದೇ ರೀತಿ ಜಲಜೀವನ ಮಿಷನ್ ಯೋಜನೆಯಡಿ ಕಿತ್ತೂರು, ಖಾನಾಪು ಹಾಗೂ ಬೈಲಹೊಂಗಲ ಕ್ಷೇತ್ರಗಳಿಗೆ 960 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ.
ಚನ್ನಮ್ಮನ ಅರಮನೆ ನಿರ್ಮಾಣಕ್ಕೆ 115 ಕೋಟಿ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.

ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿದ್ಯಾನಿಧಿ:

ರೈತರ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ರೈತರ ಮಕ್ಕಳಿಗೆ ಹಾಗೂ ಕೃಷಿ ಕೂಲಿಕಾರರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ರೈತ ವಿದ್ಯಾನಿಧಿ ಯೋಜನೆಯಡಿ ಸೌಲಭ್ಯ ಪಡೆದುಕೊಂಡು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೇದಿಕೆಯ ಮೇಲೆ ಕೆಲಕಾಲ ಸಂವಾದ ನಡೆಸಿದರು.
ಕೆಲವು ವಿದ್ಯಾರ್ಥಿಗಳು ವಿದ್ಯಾನಿಧಿ ಯೋಜನೆಯ ಅನುಕೂಲತೆಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಇದೇ ವೇಳೆ ಯೋಜನೆಯ ಫಲಾನಿಭವಿ ವಿದ್ಯಾರ್ಥಿಗಳು ನೇಗಿಲು ನೀಡಿ, ಹಸಿರು ಶಾಲು ತೊಡಿಸಿ ಸನ್ಮಾನಿಸಿದರು.

ಚನ್ನಮ್ಮನ ಹೋರಾಟ-ನಮಗೆ ಪ್ರೇರಣೆ:

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು 1857 ರಲ್ಲಿ ಹೋರಾಡಿದರು. ಆದರೆ ಅದಕ್ಕೂ ಮುಂಚೆ 1824 ರಲ್ಲಿ ಚನ್ನಮ್ಮ ಹೋರಾಡಿದ್ದರು. ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಚನ್ನಮ್ಮ ಎಂಬ ಸತ್ಯವನ್ನು ಇತಿಹಾಸದ ಪುಟಗಳಲ್ಲಿ ಸೇರಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಜೈಲಿಗೆ ಹಾಕಿದರೂ ಎದೆಗುಂದದೇ ಹೋರಾಟವನ್ನು ಮುಂದುವರಿಸಿದ ಚನ್ನಮ್ಮ ಸಂಗೊಳ್ಳಿರಾಯಣ್ಣ ಸೆರೆಸಿಕ್ಕಾಗ ಅಧೀರಗೊಂಡಿದ್ದರು.
ಸ್ವಾತಂತ್ರ್ಯದ ಕಹಳೆ ಊದುವ ಮೂಲಕ ಈ ನಾಡನ್ನು ಪವಿತ್ರಗೊಳಿಸಿದ ಚನ್ನಮ್ಮಳಿಗೆ ಕೋಟಿ ಕೋಟಿ ನಮನ. ಚನ್ನಮ್ಮನ ತ್ಯಾಗ-ಬಲಿದಾನ 200 ವರ್ಷಗಳ ಬಳಿಕವೂ ನಮಗೆ ಪ್ರೇರಣೆಯಾಗಿದೆ.

ಚನ್ನಮ್ಮನ ದೇಶಭಕ್ತಿ, ಹೋರಾಟವು ನಮಗೆ ನಾಡುಕಟ್ಟುವ ಶಕ್ತಿಯಾಗಿದೆ. ಸಮಸ್ಯೆ, ಸವಾಲು ಏನೇ ಇರಲಿ ಅವುಗಳನ್ನು ಹಿಮ್ಮೆಟ್ಟಿಸಿ ಜನಕಲ್ಯಾಣ ಕೆಲಸ ಮಾಡುವುದು ನಮ್ಮ ಧರ್ಮವಾಗಿದೆ. ಈ ಮಣ್ಣಿನಲ್ಲಿ ಹುಟ್ಟಿದ ಎಲ್ಲರೂ ಸ್ವಾಭಿಮಾನಿಗಳು. ಈ ಸ್ವಾಭಿಮಾನ ಉಳಿಯಬೇಕಾದರೆ ನಾವು ಸ್ವಾವಲಂಬಿಗಳಾಗಬೇಕಿದೆ ಎಂದು ಪ್ರತಿಪಾದಿಸಿದರು.
ಕೆಲ ವಿಚ್ಛಿದ್ರಕಾರಿ ಶಕ್ತಿಗಳು ದೇಶವನ್ನು ಅಭದ್ರಗೊಳಿಸಲು ಹವಣಿಸುತ್ತಿವೆ. ಸುದೈವದಿಂದ ವೀರ ಹಾಗೂ ದಿಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಇದ್ದಾರೆ ಎಂದು ಹೇಳಿದರು.
ಅನೇಕ ದೇಶಗಳು ಆರ್ಥಿಕವಾಗಿ ಕಂಗೆಟ್ಟಿದ್ದರೆ ಭಾರತ ಸದೃಢವಾಗಿದೆ. ಮೋದಿಯವರ ಆಡಳಿತದಲ್ಲಿ ಚನ್ನಮ್ಮನ ಸ್ವಾಭಿಮಾನದ ಮುಂದಾಲೋಚನೆ ಇದೆ ಎಂದರು.

ಚನ್ನಮ್ಮನ ಕಿತ್ತೂರು ಆಡಳಿತಸೌಧ ಉದ್ಘಾಟನೆ:

ಇದೇ ಸಂದರ್ಭದಲ್ಲಿ ಚನ್ನಮ್ಮನ ಕಿತ್ತೂರು ತಾಲ್ಲೂಕು ಆಡಳಿತ ಸೌಧವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಇದಲ್ಲದೇ ತಾಲ್ಲೂಕು ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚನ್ನಮ್ಮನ ಕಿತ್ತೂರಿನ ಶಾಸಕರಾದ ಮಹಾಂತೇಶ್ ದೊಡ್ಡಗೌಡರ, ಚನ್ನಮ್ಮನ ಉತ್ಸವವನ್ನು ರಾಜ್ಯಮಟ್ಟಕ್ಕೆ ಮೇಲ್ದರ್ಜೆಗೆ ಏರಿಸುವುದರ ಜತೆಗೆ ವಿಜಯಜ್ಯೋತಿಯನ್ನು ರಾಜ್ಯದಾದ್ಯಂತ ಸಂಚರಿಸಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸಿದರು.
ಕಿತ್ತೂರು ಮತಕ್ಷೇತ್ರದ 104 ಗ್ರಾಮಗಳಿಗೆ ನೀರು ಒದಗಿಸಲು ಸಿಎಂ‌ ನೆರವು ನೀಡಿದ್ದಾರೆ; ನೇಸರಗಿಯಿಂದ ಚನ್ನಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದರು.
ಕೋಟೆಯ ಪಕ್ಕದಲ್ಲಿಯೇ ಕೋಟೆ ಪ್ರತಿರೂಪ ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡರು. ಇದಲ್ಲದೇ ಶಿಥಿಲಗೊಂಡಿರುವ ಚನ್ನಮ್ಮನ ಕೋಟೆಯ ಜೀರ್ಣೋದ್ಧಾರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜನತೆಯ ಪರವಾಗಿ ಶಾಸಕ ದೊಡ್ಡಗೌಡರ ಮನವಿ ಮಾಡಿಕೊಂಡರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಹಾಗೂ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಚನ್ನಮ್ಮನ ಸಾಹಸಗಾಥೆ ನಮಗೆ ಪ್ರೇರಣೆಯಾಗಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ ಮಾತನಾಡಿದರು.

ಅತಿಥಿಗಳನ್ನು ಸ್ವಾಗತಿಸಿ, ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರೀಟಿಷರ ಕರಾಳ ಶಾಸನದಿಂದ ಕಿತ್ತೂರು ನಾಡ ರಕ್ಷಣೆಗಾಗಿ ಕತ್ತಿ ಝಳಪಿಸುತ್ತ ಯುದ್ಧ ಭೂಮಿಗೆ ಧುಮುಕಿದ ಚನ್ನಮ್ಮನ ಹೋರಾಟಕ್ಕೆ ಇದೀಗ 198 ವರ್ಷಗಳ ಇತಿಹಾಸ. ಇನ್ನೆರಡು ವರ್ಷಗಳಲ್ಲಿ ಎರಡನೇ ಶತಮಾನೋತ್ಸವದ ಸಂಭ್ರಮ ಎಂದು ನೆನಪಿಸಿದರು.
ಇಂತಹ ಸಂಭ್ರಮದ ಹೊಸ್ತಿಲಿನಲ್ಲಿ ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಈ ಬಾರಿ ಹೊಸ ಮೆರಗು ಬಂದಿದೆ. ಕಿತ್ತೂರಿನ ಸ್ವಾಭಿಮಾನಿ ಹಿರಿಯರು ಊರ ಜನರಿಂದ ಚಂದಾ ಸಂಗ್ರಹಿಸಿ ಆರಂಭಿಸಿದ ಕಿತ್ತೂರು ಉತ್ಸವ ಇಂದು “ರಾಜ್ಯಮಟ್ಟದ ಉತ್ಸವ” ವಾಗಿ ಆಚರಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಣೆ ಮಾಡಿ ಹೆಚ್ಚಿನ ಅನುದಾನ ಒದಗಿಸಿದ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಕೊಡುಗೆಯನ್ನು ಜಿಲ್ಲಾಧಿಕಾರಿ ವಿವರಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಚಿವ ಮುರುಗೇಶ್ ನಿರಾಣಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ್ ಕೌಜಲಗಿ, ವಿಧಾನ ಪರಿಷತ್ ಸದಸ್ಯರಾದ ಸಾಬಣ್ಣ ತಳವಾರ, ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು ಹಾಗೂ ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಇದೇ ವೇಳೆ ಅನಾರೋಗ್ಯದಿಂದ‌ ಭಾನುವಾರ ನಿಧನರಾದ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ‌ ಮಾಮನಿ ಅವರ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಸಾವಿರಾರು ಜನರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿ ಮೂರು ಸಮಾನಾಂತರ ವೇದಿಕೆಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
****

Check Also

ಬುಧವಾರ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆ ಗ್ರ್ಯಾಂಡ್ ವೆಲ್ ಕಮ್…!!!

ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ ಅವರು ನಾಳೆ ಬುಧವಾರ ಬೆಳಗಾವಿಗೆ ಬರಲಿದ್ದು ಬೆಳಗಾವಿಯ ಬಿಜೆಪಿ …

Leave a Reply

Your email address will not be published. Required fields are marked *