Breaking News
Home / Breaking News / ಒಬ್ಬಳಿಗೆ 16 ಗೋಲ್ಡ್ ಮೆಡಲ್…ಬುಷ್ರಾ ಮತೀನ್, VTU ಗೋಲ್ಡನ್ ಗರ್ಲ್….

ಒಬ್ಬಳಿಗೆ 16 ಗೋಲ್ಡ್ ಮೆಡಲ್…ಬುಷ್ರಾ ಮತೀನ್, VTU ಗೋಲ್ಡನ್ ಗರ್ಲ್….

ಬೆಳಗಾವಿ- ರಾಯಚೂರಿನ ಸಿವ್ಹಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, 16 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಈ ವಿಧ್ಯಾರ್ಥಿನಿ ರಾಷ್ಟ್ರದ ಗಮನ ಸೆಳೆದಿದ್ದಾಳೆ.

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೧ನೇ ಘಟಿಕೋತ್ಸವದಲ್ಲಿ 16 ಚಿನ್ನದ ಪದಕಗಳ ಬೇಟೆಯಾಡಿದ ರಾಯಚೂರಿನ ಗೋಲ್ಡನ್ ಗರ್ಲ್ ಬುಷ್ರಾ ಮತೀನ್ ತಮ್ಮ ಭವಿಷ್ಯದ ಸೇವೆಯ ಕುರಿತು ತಮ್ಮ ಅಭಿಪ್ರಾಯಗಳು ಹಂಚಿಕೊಂಡಿದ್ದಾರೆ.
ನಾನು ಅತೀ ಹೆಚ್ಚು ಎಂದರೆ 16 ಚಿನ್ನದ ಪದಕ ಪಡೆದ ಕನ್ನಡತಿ ಎಂಬ ಹೆಮ್ಮೆ ನನಗಿದೆ. ಲೋಕಸಭಾ ಸಭಾಧ್ಯಕ್ಷರು, ರಾಜ್ಯಪಾಲರು,ಸಚಿವರು ಇತರೆ ಗಣ್ಯರು ನನಗೆ ಪದವಿ, ಚಿನ್ನದ ಪದಕ ಪ್ರದಾನ ಮಾಡಿರುವ ವಿಚಾರ ನನಗೆ ಹೆಮ್ಮೆಯ ಸಂಗತಿ. ನಮ್ಮ ತಂದೆ ರಾಯಚೂರಿನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೇ ನನಗೆ ಪ್ರೇರಣೆ, ಸ್ಪೂರ್ತಿಯಾಗಿದ್ದಾರೆ. ಹಾಗಾಗಿ, ನಾನು ಸಿವಿಲ್ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡೆ. ಸಿವಿಲ್ ಸರ್ವಿಸ್‌ನಲ್ಲಿ ನಮ್ಮ ಮನೆಯಲ್ಲಿ ಯಾರೂ ಇಲ್ಲ. ಭವಿಷ್ಯದಲ್ಲಿ ನಾನು ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದೇನೆ. ಈ ನಿಟ್ಟಿನಲ್ಲಿ ನಾನು ಯುಪಿಎಸ್‌ಇ ಆನ್‌ಲೈನ್ ತರಬೇತಿಯನ್ನು ಪಡೆಯಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ ಎಂದು 16 ಚಿನ್ನದ ಪದಕ ಪಡೆಯುವ ಮೂಲಕ ಅತೀ ಹೆಚ್ಚು ಚಿನ್ನದ ಪದಕ ಪಡೆದ ರಾಯಚೂರಿನ ಎಸ್‌ಎಲ್‌ಎನ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ ಹೇಳಿದರು.

ಐಎಎಸ್ ಅಧಿಕಾರಿಯಾಗುವ ಆಸೆ
ತಂದೆ, ತಾಯಿ ಇಬ್ಬರೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದಾರೆ. ನಾನು ನಿತ್ಯ ಓದುತ್ತಿರಲಿಲ್ಲ. ಪರೀಕ್ಷೆಗೂ ಮುನ್ನ ಎರಡು ತಿಂಗಳು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದ ಪರಿಣಾಮ ರ‌್ಯಾಂಕ್ ಸಮೇತ ನನಗೆ ಏಳು ಚಿನ್ನದ ಪದಕ ದೊರೆತಿವೆ. ನಾನು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದೇನೆ. ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವ ಆಸೆಯಿದೆ ಎಂದು ಬೆಳಗಾವಿ ತಾಲೂಕಿನ ಹುದಲಿಯ ವಿವೇಕ ಭದ್ರಕಾಳಿ ಪ್ರತಿಕ್ರಿಯಿಸಿದರು.
ತಂದೆ ನಾಗರಾಜ ಭದ್ರಕಾಳಿ ಖಾನಾಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರೆ, ತಾಯಿ ಸವಿತಾ ಹುದಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನೆಲ್ಲ ಸಾಧನೆಗೆ ತಂದೆ, ತಾಯಿ, ಗುರುಗಳ ಆರ್ಶೀವಾದವೇ ಕಾರಣ. ನನ್ನ ಸಹೋದರ ಬಿಇ ಎಂಜಿನಿಯರಿಂಗ್ ಪದವಿಧರ. ಆತ ಚಿನ್ನದ ಪದಕ ಪಡೆಯುವ ಕನಸು ಕಂಡಿದ್ದ. ಆದರೆ, ಅದು ನನಸಾಗಲಿಲ್ಲ. ಚಿನ್ನದ ಪದಕ ತೆಗೆದುಕೊಳ್ಳಬೇಕೆಂಬ ಸಹೋದರನ ಕನಸನ್ನು ನಾನು ನನಸು ಮಾಡಿದ್ದೇನೆ ಎಂದು ಭದ್ರಕಾಳಿ ಹೇಳಿದರು.

ಆನ್‌ಲೈನ್ ತರಗತಿಯಿಂದ ಒಳ್ಳೆಯ ಅನುಭವ
ಕೋವಿಡ್ ಹಿನ್ನೆಲೆಯಲ್ಲಿ ಆನ್‌ಲೈನ್ ತರಗತಿ ಶುರುವಾದವು. ಮೊದ ಮೊದಲು ಇದು ವಿಭಿನ್ನವಾಗಿತ್ತು. ನಂತರ ಪ್ರಾಧ್ಯಾಪಕರು ಆನ್‌ಲೈನ್ ಪಾಠಕ್ಕೆ ನಾವು ಹೊಂದಿಕೊಂಡೇವು. ಇದೊಂದು ಒಳ್ಳೆಯ ಅನುಭವವಾಯಿತು. ನನ್ನ ತಂದೆ ಎಚ್‌ಪಿ ಪಾರ್ಟರ್ ಕಂಪನಿಯಲ್ಲಿ ಸಿನಿಯರ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ತಾಯಿ ಗೃಹಣಿಯಾಗಿದ್ದಾರೆ. ಕಾಲೇಜು ಅವಧಿ ಮುಗಿದ ಬಳಿಕ ನಾನು ಮನೆಯಲ್ಲಿ ನಿತ್ಯ ೬ ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ನೋಟ್ಸ್ , ಬುಕ್ ಓದುವುದು ಮುಖ್ಯವಲ್ಲ. ಪರಿಕಲ್ಪನೆಗಳಿಗೆ ನಾನು ಹೆಚ್ಚಿನ ಮಹತ್ವ ನೀಡಬೇಕು. ಅಂದಾಗ ಮಾತ್ರ ನಾವು ಸಾಧನೆ ಮಾಡಲು ಸಾಧ್ಯವಾಗುತ್ತದೆ. ನನಗೆ ಏಳು ಚಿನ್ನದ ಪದಕ ದೊರತಿವೆ ಎಂದು ಬೆಂಗಳೂರಿನ ಬಿ.ಎನ್.ಎಮ್. ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯ ಎಲೆಟ್ರಿಕಲ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ವಾತಿ ದಯಾನಂದ ಹೇಳಿದರು.

ನಾನು ಯುಪಿಎಸ್‌ಸಿಯತ್ತ ಗಮನ ಹರಿಸಲ್ಲ
ನಾನು ಸದ್ಯ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇನ್ನೂ ಎರಡು ವರ್ಷ ಅಲ್ಲಿಯೇ ಸೇವೆ ಸಲ್ಲಿಸುತ್ತೇನೆ. ಸರ್ಕಾರಿ ಸೇವೆ ಸಿಕ್ಕರೆ ಹೋಗುತ್ತೇನೆ. ಆದರೆ, ನಾನು ಯುಪಿಎಸ್‌ಸಿಯತ್ತ ಗಮನ ಹರಿಸುವುದಿಲ್ಲ. ತಂದೆ ತಿಪ್ಪಾರೆಡ್ಡಿಕೃಷಿಕರಾಗಿದ್ದು, ನಮ್ಮ ತಾತ ಉಪೇಂದ್ರ ರೆಡ್ಡಿ ಅವರೇ ನನಗೆ ಓದಲು ಪ್ರೋತ್ಸಾಹಿಸಿದ್ದಾರೆ. ಅವರ ಆರ್ಶೀವಾದದಿಂದ ನಾನು ಏಳು ಚಿನ್ನದ ಪದಕ ಪಡೆದಿದ್ದೇನೆ ಎಂದು ಬಳ್ಳಾರಿಯ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ನ ವಿಧ್ಯಾರ್ಥಿನಿ ಚಂದನಾ ಎಂ ಹೇಳಿದರು.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *