Breaking News
Home / Breaking News / ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ….!!!

ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ….!!!

*”ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ”*

*ನಾನಳಲು ನಗಿಸುವವರ್ಯಾರಿಲ್ಲಿ?!*

‘ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ’ ಕವಿ ಡಿ.ಎಸ್. ಕರ್ಕಿ ಹೇಳಿದ ಕವಿವಾಣಿ ಪ್ರಜಾಪ್ರಭುತ್ವದ ನಾಲ್ಕನೆ ಕಂಬ ಎನಿಸಿರುವ ಪತ್ರಿಕೆ ಹಾಗೂ ವಿದ್ಯುನ್ಮಾಣ ಮಾಧ್ಯಮಕ್ಕೆ ಅನ್ವಯಿಸುತ್ತದೆ ಎನ್ನುವುದಕ್ಕೆ  ಬೀದಿ ಬೀದಿ ಸುತ್ತಾಡಿ ಮಹಾಮಾರಿ ಕೊರಾನಾ ಸೋಂಕಿನ ಬಗ್ಗೆ ಇಂಚಿಂಚು ವರದಿ ಮಾಡುತ್ತಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಜನರ ಹತ್ತಿರ ಹೋಗಿ ಸೋಂಕಿನ ವಸ್ತುಸ್ಥಿತಿಯ ವರದಿಯಲ್ಲಿ ನಿರಂತರ ತೊಡಗಿಕೊಂಡಿರುವ ವಿದ್ಯುನ್ಮಾಣ ಮಾಧ್ಯಮದ ವರದಿಗಾರರು ಎಂಥ ಭಯಾನಕ ಸ್ಥಿತಿಯಲ್ಲೂ ಅಳುತ್ತಿರುವ ಜಗದ ಮಧ್ಯ ಇಳಿದು ಕಣ್ಣೀರು ಒರೆಸುವಲ್ಲಿ ಮುಂದಾಗಿರುವುದು ಕವಿ ಹೇಳಿದ ಮಾತಿನ ವಾಸ್ತವ ಕಣ್ಣಿಗೆ ಕಟ್ಟುತ್ತದೆ.

ಪ್ರತಿಭಟನೆ, ಹೋರಾಟ, ಸಂಘರ್ಷ, ಪ್ರವಾಹ, ಭಯಾನಕರ ರೋಗಗಳು,  ಇತರೆ ಜೀವಕುಲದ ನಾಶದ ಅವಘಡಗಳು ಸಂಭವಿಸಿದಾಗ ಜೀವದ ಹಂಗು ತೊರೆದು ವಸ್ತುಸ್ಥಿತಿಯನ್ನು ತೆರೆದಿಡುವಲ್ಲಿ ಮಾಧ್ಯಮದವರು ನಿರ್ವಹಸುತ್ತ ಬಂದಿರುವ  ಪಾತ್ರ ದೊಡ್ಡದು. ಪ್ರಸ್ತುತ ಕೊರೊನಾದೊಂದಿಗೆ ಮುಖಾಮುಖಿಯಾಗಿ ಅದರ ಎಲ್ಲ ವೃತ್ತಾಂತದ ಬೆಳವಣಿಗೆಯನ್ನು ಎದುರಿಗಿಡುತ್ತಿರುವುದು ಎಂಥ ಸಾಹಸದ ಕೆಲಸ ಎನ್ನುವುದು ಮಾಧ್ಯಮದಲ್ಲಿದ್ದವರಿಗೆ, ಅವರನ್ನು ಬಲ್ಲವರಿಗೆ ಮಾತ್ರ ಗೊತ್ತು. ಅದರಲ್ಲೂ ವಿಶೇಷವಾಗಿ ಮನಭಾರದ ಕ್ಯಾಮಕರಾಹೊತ್ತು, ಕೊರಳಿಗೆ ಹಗ್ಗ ಕಟ್ಟಿಕೊಂಡಂತೆ ಲೋಗೊದ ಬುಡಕ್ಕೆ ಜೊಡಿಸಿದ ಕೇಬಲ ಸುತ್ತಿಕೊಂಡು ಎಲ್ಲೆಂದರಲ್ಲಿ ನೇರ ವರದಿಯಲ್ಲಿ ತೊಡಿರುವ ಟಿವಿ ಮಾಧ್ಯಮದವರು ತಾವೇ ಯಾವಾಗ ಬ್ರೇಕಿಂಗ್ ನ್ಯೂಜ್ ಆಗುವುದು ಗೊತ್ತಿಲ್ಲದೆ ಧಾವಿಸುತ್ತಾರೆ.

ಹೀಗೆ ಸಾಹಸ ಮೇರೆಯುವ ಇರಿಗೆ  ಸ್ವತಃ ಖರೀದಿಸಿದ ಮಾಸ್ಕವೊಂದನ್ನು ಹೊರತುಪಡೆಸಿದರೆ ಬೇರೆ ಯಾವುದೇ ಸೆಕ್ಯೂರಿಟಿ ಎಂಬುದು ಇಲ್ಲ. ವಿದ್ಯುನ್ಮಾಣ ಮಾಧ್ಯಮದ ವಿಪರಿತ ಸ್ಪರ್ಧೆಯ ಮಧ್ಯ ಇವರು ಮನೆಯಲ್ಲಿದ್ದು ವರದಿ ಮಾಡುವುದು ಎಂದರೆ ಅದು ಕನಸಿನಲ್ಲೂ ಕಾಣಲು ಸಾಧ್ಯಿವಲ್ಲ. ವೈರಾಣು ಹರುಡುವಿಕೆಯ ಸ್ಕ್ರಿಪ್ಟ್ ಬರೆದೊಗೆದರೆ ಟೆಬಲ್‍ದವರು ಅಲ್ಲಿಂದಲೇ ಕರಳುತ್ತಾರೆ “ವಿಶುವಲ್ ಕಳುಹಿಸಿ” ಎಂದು. ತಡವಾದರೆ ಕೆಲವರು ಹರಿಹಾಯುತ್ತಾರೆ. ನೌಕರಿ ಉಳಿಸಿಕೊಳ್ಳುವ, ಕರ್ತವ್ಯ ನಿರ್ವಹಿಸುವ ಮಧ್ಯ ಹಂಗುತೊರೆದು ಯಾವುದೇ ಅಸ್ತ್ರಗಳಿಲ್ಲದೆ ಕೊರಾನೊ ಯುದ್ದಭೂಮಿಗೆ ಇಳಿದಿರುವುದು ಸಾಮಾನ್ಯ ದೃಶ್ಯ.

ಜಗದ ಅಳುವಿಗೆ ಸ್ಪಂದಿಸಿ, ನಗು ಮೂಡಲು ಕಾರಣಗಳನ್ನು ಹುಡುಕುವ ಈ ಮಾಧ್ಯಮ ಸ್ನೇಹಿತರ ಅಳುವನ್ನೂ ಗಮನಿಸಬೇಕಾದ ಅಗತ್ಯವಿದೆ. ಅವರಿಗೂ ಹೆಂಡಿತಿ ಮಕ್ಕಳಿದ್ದಾರೆ. ಅವರಿಗೂ ಎಲ್ಲರಂತೆ ಬದುಕಿದೆ. ಕೈಜಾರಿದರೆ ಇಡೀ ಬಡ ಕುಟುಂಬ ಅನಾಥವಾಗುತ್ತದೆ. ಹೀಗಾಗಿ, ಮಾಧ್ಯಮ ಸಂಸ್ಥೆಗಳು, ಸರ್ಕಾರ ಇವರ ಬಗ್ಗೆಯೂ ಕಾಳಜಿವಹಿಸಬೇಕಾದ ಅಗತ್ಯವಿದೆ.

ಕೊರಾನೊದ ಅತ್ಯಂತ ಅಪಾಯಕಾರಿ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಯವರು ವಿನಾಕಾರಣ ಸ್ಪರ್ಧೆಗೆ ಇಳಿದು ದೃಶ್ಯಗಳು ಬೇಕೇಬೇಕು ಎಂದು ಹಟಕ್ಕೆ ಬಿದ್ದರೆ, ಬೇರೆ ಮಕ್ಕಳನ್ನು ಬಾವಿಗೆ ದೂಡಿ ಮೋಜು ನೋಡಿದಂತಾಗುತ್ತದೆ. ಸಂಸ್ಥೆಯವರು ದೃಶ್ಯಗಳಿಗೆ ಕಡಿವಾಣಹಾಕಿ ವರದಿಗಾರರ, ಕ್ಯಾಮರಾಮನ್‍ಗಳ ಸಂಕಷ್ಟಕ್ಕೆ ಸ್ಪಂದಿಸಿ, ಸುರಕ್ಷಿತೆಗೆ ಆದ್ಯತೆ ನೀಡಿ, ದೃಶ್ಯವಿಲ್ಲದೆವೂ ಮಾಹಿತಿಗಳನ್ನು ನೀಡಲು ಸಾಧ್ಯವಿದೆ ಎಂಬುದನ್ನು ಅರಿತು ಅನುಸರಿಸಬೇಕಾದ ಅಗತ್ಯವಿದೆ.

ಹೀಗೆ ವರದಿಗಾರಿಕೆಯಲ್ಲಿ ತೊಡಗಿದವರ ಬಗ್ಗೆ ಸರ್ಕಾರ, ಇವರಿಗೂ ನಮಗೂ ಯಾವುದೇ ಸುಂಬಂಧವಿಲ್ಲದಂತೆ ಉಳಿದರೆ ಮೋಜು ನೋಡಿದಂತಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ವರದಿಗರಿಕೆಗೆ ಪೂರಕವಾದ ಅನುಕೂಲ ಹಾಗೂ ಸುರಕ್ಷತೆ ಒದಗಿಸುವುದು  ತುರ್ತು ಅಗತ್ಯವಾಗುತ್ತದೆ. ಅಪಾಯಕಾರಿ ಸ್ಥಳಗಳಲ್ಲಿ ವರದಿಗರರು ಪ್ರವೇಶಿಸಿ ಸಾಹಸ ಮೆರೆಯದಂತೆ ಸಕಾಲಿಕ ಸೂಕ್ತ ಮಾಹಿತಿಗಳು ಚಿತ್ರ ಹಾಗೂ ವಿಡಿಯೋ ಸಹಿತ ಸರ್ಕಾರವೇ ನೀಡುವ ಜವಾಬ್ದಾರಿ ನಿರ್ವಹಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ. ಕಾಲಕಾಲಕ್ಕೆ ಆದ ಬದಲಾವಣೆಯನ್ನು ಮಾಧ್ಯಮದವರಿಗೆ ತಿಳಿಸುವ ಕ್ರಮತೆಗೆದುಕೊಂಡರೆ ಅದೆಷ್ಟೋ ಅನುಕೂಲವಾಗುತ್ತದೆ.

***

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *