Breaking News

ಬೆಳಗಾವಿಯಲ್ಲಿ ಜ,18ರಿಂದ ಮೂರು ದಿನ ಗಾಳಿಪಟ ಉತ್ಸವ

ಬೆಳಗಾವಿ: ಪರಿವರ್ತನ ಪರಿವಾರದ ವತಿಯಿಂದ ೧೦ ನೇ ಬೆಳಗಾವಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಳೆಯ ಪಿಬಿ ರಸ್ತೆಯ ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಜ. ೧೮ರಿಂದ ೨೧ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ಕಳೆದ ೯ ವರ್ಷಗಳಿಂದ ಆಚರಿಸುತ್ತ ಬರಲಾಗಿದೆ. ಜಾಗತಿಕ ಮಟ್ಟದಲ್ಲಿ ಬೆಳಗಾವಿ ನಗರ ಮತ್ತು ನಗರದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಿದೆ. ಈ ಹಬ್ಬವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಉತ್ಸವದಲ್ಲಿ ೫ ರಾಜ್ಯಗಳಿಂದ ೨೫ ರಾಷ್ಟ್ರೀಯ ಹಾಗೂ ೧೫ ಅಂತಾರಾಷ್ಟ್ರೀಯ ಗಾಳಿಪಟ ಹಾರಿಸುವ ತಜ್ಞರು ಪಾಲ್ಗೊಳ್ಳುವರು. ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಳಿ ಪಟ ಉತ್ಸವದ ಜೊತೆಗೆ ಯುವ ಜನತೆಗಾಗಿ ಉಮಂಗ ಯುಥ್ ಫೆಸ್ಟಿವಲ್, ಶಾಲಾ ಮಕ್ಕಳಿಗಾಗಿ ಮಕ್ಕಳ ಹಬ್ಬ ಮತ್ತು ಬಲೂನ ಉತ್ಸವ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಡಿಜೆ ಶೋ ಮತ್ತು ಪಟಾಕಿ ಪ್ರದರ್ಶನ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಳೆದ ೯ ವರ್ಷಗಳಿಂದ ಬೆಳಗಾವಿಯಲ್ಲಿ ನಾನು ಸ್ವತಃ ಖರ್ಚು ಮಾಡಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಮ್ಮಿಕೊಳ್ಳುತ್ತ ಬಂದಿದ್ದೇನೆ. ಆದರೆ, ಈವರೆಗೂ ನಮ್ಮ ಗಾಳಿಪಟ ಉತ್ಸವಕ್ಕೆ ಸರ್ಕಾರದಿಂದ ಯಾವುದೇ ನೆರವು ದೊರೆತಿಲ್ಲ. ಈ ಬಾರಿ ನಾನು ಪ್ರವಾಸೋದ್ಯಮ ಸಚಿವರಿಗೆ ಬೆಳಗಾವಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ₹ ೨೫ ಲಕ್ಷ ಅನುದಾನ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದ್ದು, ಈ ವಿಚಾರದಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧವಿರುವುದಾಗಿ ಶಾಸಕ ಅಭಯ ಪಾಟೀಲ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿವರ್ತನಾ ಪರಿವಾರದ ಚೈತನ್ಯ ಕುಲಕರ್ಣಿ, ಅಶೋಕ ನಾಯ್ಕ, ಗಣೇಶ ಮಳಲಿಕರ ಮೊದಲಾದವರು ಉಪಸ್ಥಿತರಿದ್ದರು.

Check Also

ಶಾಲಿನಿ ರಜನೀಶ್, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ..

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಇದೇ ಜುಲೈ 31ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ​ ಪತ್ನಿ ಶಾಲಿನಿ …

Leave a Reply

Your email address will not be published. Required fields are marked *