Home / Breaking News / ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ

ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ 2 ಚುನಾವಣೆ ಪ್ರಚಾರ ಸಭೆ

ಬೆಳಗಾವಿ: ಪ್ರತಿ ಬಾರಿ ರಾಜ್ಯಕ್ಕೆ ಬಂದಾಗ ಪ್ರಧಾನಿ ಮೋದಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ. ಹೆಣ್ಣು ಮಕ್ಕಳ ತಾಳಿ, ಕೈ ಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗುವ ಮೋದಿಯಿಂದ ಪ್ರಧಾನಿ ಹುದ್ದೆಗೆ ಮರ್ಯಾದೆ ಬರಲ್ಲ. ಆದ್ದರಿಂದ ಸುಳ್ಳುಗಳ ಮೂಲಕ ನಿಮಗೆ ಬಕ್ರಾ ಮಾಡುವ ಮೋದಿಗೆ ಅಧಿಕಾರ ನೀಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಗವಾಡ ತಾಲ್ಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾಗವಾಡ, ಅಥಣಿ, ಕುಡಚಿ, ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ 2 ಚುನಾವಣೆ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಷ್ಟೊಂದು ಸುಳ್ಳು ಹೇಳೋ ಮೋದಿಗೆ ನಾಚಿಕೆನೂ ಆಗಲ್ಲ. ಇವರಿಗೆ ಮಾನ ಮರ್ಯಾದೆನೂ ಇಲ್ಲ. ಈ ಪ್ರಧಾನಿ ಮೋದಿ ಯಾವ ಮಟ್ಟದ ಸುಳ್ಳು ಸೃಷ್ಟಿ ಮಾಡ್ತಾರಲ್ಲಾ ನಾಚ್ಕೆನೂ ಆಗಲ್ಲ ಎಂದು ಮೋದಿ ಅವರ ಸುಳ್ಳುಗಳನ್ನು ಪಟ್ಟಿ ಮಾಡಿದ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮುಂದುವರೆಸಿದರು.

ಕಿತ್ತೂರು ರಾಣಿ ಜಯಂತಿ ಆಚರಣೆಗೆ ಆದೇಶಿಸಿದ್ದು ನಾವು, ಬೊಮ್ಮಾಯಿ ಮಾಡ್ಲಿಲ್ಲ, ಯಡಿಯೂರಪ್ಪ ಮಾಡ್ಲಿಲ್ಲ. ನಾವು ಯಾವತ್ತೂ ಶಿವಾಜಿ ಮಹಾರಾಜರನ್ನು ಅವಮಾನಿಸಿಲ್ಲ. ಆದರೆ ಈ ಮೋದಿ ಬೆಳಗಾವಿಗೆ ಬಂದು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ನವರು ರಾಣಿ ಚನ್ನಮ್ಮರಿಗೆ ಮತ್ತು ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದೀವಿ ಎಂದು ಸುಳ್ಳು ಹೇಳ್ತೀರಲ್ಲಾ , ಸುಳ್ಳಿಗೆ ಒಂದು ಮಿತಿಯಾದರೂ ಬೇಡ್ವಾ ಮೋದಿ ಎಂದು ಮಾತಿನಲ್ಲೇ ಕುಟುಕಿದರು.

ಈಗ ಮೋದಿ ಹಿಂದುಳಿದ ಜಾತಿ ಸಮುದಾಯಗಳನ್ನು ಮುಸ್ಲೀಮರ ವಿರುದ್ಧ ಎತ್ತಿಕಟ್ಟಲು ಭಯನಾಕ ಸುಳ್ಳು ಸೃಷ್ಟಿಸಿದ್ದಾರೆ. ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ಕೊಡ್ತಾರೆ ಎನ್ನುವ ಭತಾನಕ ಸುಳ್ಳು ಹೇಳಿದ ಮೋದಿಯವರಿಗೆ ನಾಚಿಕೆ ಅನ್ನೋದೇ ಇಲ್ಲ ಎಂದರು.

ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ಹಾಕ್ತೀವಿ ಎಂದು ನಂಬಿಸಿ ಪ್ರತಿ ಭಾರತೀಯರ ಹಣೆಗೆ ಮೂರು ನಾಮ ತಿಕ್ಕಿದ್ರು. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದು ನಂಬಿಸಿ ಕೆಲಸ ಕೇಳಿದ್ರೆ ಪಕೋಡ ಮಾರಿ ಅಂತೀರಿ. ಥೂ ನಿಮಗೆ ನಾಚಿಕೆನೇ ಆಗಲ್ವಾ ಎಂದು ಪ್ರಶ್ನಿಸಿದರು.

ಡಾಲರ್ ಎದುರು ರೂ. ಮೌಲ್ಯ ಇಳಿಸ್ತೀವಿ ಅಂದ್ರಿ, ಇಳಿಸಿದ್ರಾ? ಬೆಲೆ ಏರಿಕೆ ತಡಿತೀವಿ ಅಂದ್ರಿ. ತಡೆದ್ರಾ ? ಪ್ರತೀ ಬಾರಿ ರಾಜ್ಯಕ್ಕೆ ಬರೋದು ಹೊಸ ಹೊಸ ಸುಳ್ಳು ಹೇಳಿ ಹೋಗೋದು. ಇನ್ನೂ ಎಷ್ಟು ವರ್ಷ ಹಿಂದುಳಿದ ಜಾತಿ-ಸಮುದಾಯಗಳನ್ನು ನಂಬಿಸಿ ವಂಚಿಸ್ತೀರಿ? ಸುಳ್ಳು ಹೇಳ್ಕೊಂಡು ತಿರುಗ್ತೀರಿ ಎಂದು ಕೇಳಿದರು.

ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್: ಬಿಜೆಪಿ ಭಾರತೀಯರ ಭಾವನೆಗಳ ಜೊತೆ ಚೆಲ್ಲಾಟ ಆಡ್ಕೊಂಡು ಲಾಭ ಮಾಡಿಕೊಳ್ತಾರೆ. ಆದರೆ ನಾವು ಕಾಂಗ್ರೆಸ್ಸಿವರು ಜನರ ಬದುಕಿನ‌ ಸಂಕಷ್ಟಗಳನ್ನು ಕಡಿಮೆ ಮಾಡಲು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಈಡೇರಿಸಿದ ನೈತಿಕತೆಯಿಂದ ನಾವು ನಿಮ್ಮ ಮುಂದೆ ಬಂದು ಮತ ಕೇಳುತ್ತಿದ್ದೇವೆ ಎಂದರು.

ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ : ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಪ್ರತೀ ವರ್ಷ ಮಹಿಳಾ ಯಜಮಾನಿಯ ಖಾತೆಗೆ ಒಂದು ಲಕ್ಷ ರೂ. ಜಮೆ ಆಗತ್ತೆ. ಇಡೀ ದೇಶದ ರೈತರ ಸಾಲ ಮನ್ನಾ ಆಗತ್ತೆ. ನಿರುದ್ಯೋಗಿ ಯುವಕ ಯುವತಿಯರಿಗೆ ಲಕ್ಷ ರೂಪಾಯಿ ಸಿಗತ್ತೆ. ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿ ಆಗತ್ತೆ. ಇದಕ್ಕಾಗಿ ಕಾಯ್ದೆ ಮಾಡ್ತೀವಿ. ಇಂತಹ 25 ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸಹಿ ಹಾಕಿದ್ದಾರೆ. ಹೀಗಾಗಿ ಸುಳ್ಳುಗಳ ಮೂಲಕ ನಿಮಗೆ ಬಕ್ರಾ ಮಾಡುವ ಮೋದಿಗೆ ಮತ ಹಾಕ್ತೀರೋ, ನುಡಿದಂತೆ ನಡೆದ ನಮಗೆ ಮತ ಹಾಕ್ತೀರೋ ತೀರ್ಮಾನಿಸಿ ಎಂದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಶಿವಕುಮಾರ್ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ನಾವು ಪ್ರಜಾಧ್ವನಿ ಯಾತ್ರೆಯನ್ನು ಬೆಳಗಾವಿಯಿಂದ ಚಾಲನೆ ನೀಡಿದ್ದೇವು. ನಿಮ್ಮ ನೆಲದಿಂದಲೇ ಪ್ರಚಾರ ಆರಂಭಿಸಿ. ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ, ಒಂದೊಂದು ಯೋಜನೆಗೆ ಚಾಲನೆ ನೀಡಿದ್ಧೇವೆ. ಇಡೀ ರಾಜ್ಯದಲ್ಲಿಯೇ ಚಿಕ್ಕೋಡಿ ಲೊಕಸಭೆಯಿಂದ ಅತೀ ಹೆಚ್ಚು ಮತ ಪಡೆದು ಪ್ರಿಯಂಕಾ ಜಾರಕಿಹೊಳಿ ಗೆಲ್ಲುತ್ತಾಳೆಂದು ನಮಗೆ ವಿಶ್ವಾಸವಿದೆ ಎಂದರು.

ಇನ್ನು ಹಾಲಿ ಸಂಸದರು ಏನನ್ನು ಕೆಲಸ ಮಾಡಿದ್ದಾರೆಂದು ಪ್ರಶ್ನಿಸಿ, ರೈತರ ಆದಾಯ ದ್ವಿ ಗುಣ ಆಯಿತಾ..? ಎಂದು ಪ್ರಶ್ನಿಸಬೇಕು. ಪ್ರಧಾನ ನರೇಂದ್ರ ಮೋದಿ ವಿಧಾನಸಭೆ ಚುನಾವಣೆಯಲ್ಲಿ ಗಲ್ಲಿ ಗಲ್ಲಿ ರಾಜ್ಯದಲ್ಲಿ ಸುತ್ತಿದ್ದರೂ, ರಾಜ್ಯದಲ್ಲಿ14 ಜನ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿದರು. ಸ್ಥಳೀಯ ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖ ನೋಡಿ ವೋಟ್ ಹಾಕಿ ಎನ್ನುತ್ತಾರೆ. ಹಾಗಾದರೆ ನಿವೆನೂ ಕೆಲಸ ಮಾಡಿದ್ದಿರಿ ಎಂದು ಬಿಜೆಪಿ ಅಭ್ಯರ್ಥಿಗಳ ವಿರುದ್ದ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ನೀಡಿದ ಯೋಜನೆಗಳನ್ನು ಪ್ರತಿಯೊಬ್ಬರು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಆರು ತಿಂಗಳು ಹಿಂದೆ ನಾವು ಅನುದಾನ ಕೇಳಿದ್ದಿವಿ. ಆದರೆ ನಿನ್ನೆ ಅನುದಾನ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ನಾವು ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಿ ಚಿಕ್ಕೋಡಿಗೆ ಬಂದಿದ್ದೇವೆ ಎಂದರು.

ಉ.ಕದಲ್ಲಿ ಹೆಚ್ಚಿನ ಸೀಟು ಗೆಲ್ಲೋದು ಕಾಂಗ್ರೆಸ್:‌ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಂಸ್ಕೃತಿಯೇ ಇಲ್ಲಾ. ಕೊರೋನಾ ಬಂದಾಗ ನಾವು ಅಧಿಕಾರದಲ್ಲಿ ಇರಲಿಲ್ಲ. ಆದರೆ ಸಿದ್ದರಾಮಯ್ಯ, ನಾನು ಜನರ ಬಳಿ ಹೋಗಿ ಜನತೆಯ ಸಮಸ್ಯೆಗೆ ಸ್ಪಂದಿಸಿದ್ದೇವೆ. ಬಿಜೆಪಿಯ ಕೇಂದ್ರ ಸಚಿವ ಸುರೇಶ ಅಂಗಡಿ ಸತ್ತಾಗ ಜೆಸಿಬಿ ಮೂಲಕ ಹೆಣವನ್ನು ಮಣ್ಣು ಮಾಡಿದ ಬಿಜೆಪಿಯವರು ನಮ್ಮ ಸಂಸ್ಕೃತಿ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ದಾನ ಧರ್ಮ ಮಾಡುವು ಕೈ ಅಧಿಕಾರದಲ್ಲಿ ಇರಬೇಕು; ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ಬರುತ್ತದೆ. ಆರೋಗ್ಯ ವಿಮೆ 25 ಲಕ್ಷ,ಬೆಂಬಲ ಬೆಲೆ ಜಾರಿ ತರುತ್ತೇವೆ. ರೈತರಿಗೆ ಅನುಕೂಲ ಕಲ್ಪಿಸುತ್ತೇವೆ ಆದ್ದರಿಂದ ಈ ಭಾರಿ ಕಾಂಗ್ರೆಸ್‌ ಗೆ ಮತ ನೀಡಲು ಪ್ರತಿ ಮತದಾರರು ಮುಂದಾಗಬೇಕು ಎಂದು ಕರೆ ನೀಡಿದರು.

ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ದೇಶದಲ್ಲಿ ಅತೀ ದೊಡ್ಡ ಚುನಾವಣೆ ಜರುಗಿತ್ತಿದೆ. ಕೋಮುವಾದಿ ಪಕ್ಷ ಮತ್ತೆ ಅಧಿಕಾರಕ್ಕೆ ಬರದಂತೆ ನಾವು ನೋಡಿಕೊಳ್ಳಬೇಕು. ಮತ್ತೊಮ್ಮೆ ಈ ದೇಶದ ಅಧಿಕಾರ ಸೆಕ್ಯುಲರ್‌ ಪಕ್ಷದ ಕೈಗೆ ಸಿಗಬೇಕು. ನಮಗೆ ಒಳ್ಳೆಯ ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಬೇಕು. ಇದೆಲ್ಲ ಬೇಕೆಂದರೆ ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರ ತರಬೇಕು. ಹೊರತು ಜಾತಿ, ಧರ್ಮಗಳ ನಡುವೆ ಉಂಟಾಗುವ ಜಗಳವಲ್ಲ ಎಂದರು.

ಸ್ತ್ರೀಯರಿಗೆ ಶಕ್ತಿ ತುಂಬುವ ಕೆಲಸ ಸಿಎಂ ಹಾಗೂ ಡಿಸಿಎಂ ಮಾಡಿದ್ದಾರೆ. ಈ ಭಾಗದ ನೀರಾವರಿ ಸೌಲಭ್ಯಗಳ ಶಾಶ್ವತ ಪರಿಹಾರವಾಗಬೇಕಿದೆ. ಮಾರ್ಚನಲ್ಲೇ ಸಿಎಂ ಸಿದ್ದರಾಮಯ್ಯನವರು ನಮಗೆ ಸೂಚನೆ ನೀಡಿದ್ದರು. ಅವರ ಸೂಚನೆ ಮೇರೆಗೆ ಹಿಡಕಲ್ ಡ್ಯಾಮ್ ನಲ್ಲಿ ನೀರು ಇಟ್ಟುಕೊಂಡಿದ್ದೆವು. ಆದ್ದರಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ ಎಂದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಸಿಎಂ ಹಾಗೂ ಡಿಸಿಎಂ ಭರವಸೆ ನೀಡಿದ್ದರು. ನಾವು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆಂದು ಹೇಳಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳಲ್ಲಿಯೇ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಅಂತ ಸಾಧನೆ ಮಾಡಿದ ಸರ್ಕಾರ ಸಿದ್ದರಾಮಯ್ಯ ಸರ್ಕಾರ.ಈ ಕಾರಣದಿಂದ ಇಂದು ನಿಮ್ಮ ಬಳಿ ಬಂದು ಮತ ಕೇಳಲು ಆಧಿಕಾರವಿದೆ. ಆದರೆ ನಿಮ್ಮ ಹತ್ತಿರ ಮತ ಕೇಳುವ ನೈತಿಕ ಹಕ್ಕನ್ನು ಬಿಜೆಪಿಯವರು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

2014ಲ್ಲಿ ಮೋದಿ ಪ್ರಧಾನಿಯಾದರೆ ಗಂಗಾನದಿಯನ್ನು ಕಾವೇರಿಗೆ, ಕಾವೇರಿ ನೀರನ್ನು ಕೃಷ್ಣೆಗೆ ಬಿಡುತ್ತೇವೆಂದಿದ್ದರು. ನದಿ ಜೋಡಣೆ ಮಾಡುತ್ತೇವೆಂದಿದ್ದರು. ಯಾವುದಾದರೂ ಒಂದು ರಾಜ್ಯದಲ್ಲಿ ನದಿ ಜೋಡಣೆ ಆಗಿದೆಯಾ..? ರೈತರ ಆದಾಯ ಡಬಲ್ ಮಾಡುತ್ತೇವೆಂದು ಬಿಜೆಪಿಯವರು ಹೇಳಿದ್ದು ಹುಸಿಯಾಗಿದೆ ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಲಕ್ಷ್ಮಣ ಸವದಿ ಕಿಡಿ ಕಾರಿದರು.

ರೈತರ ಆದಾಯ ಡಬಲ್ ಆಗಿಲ್ಲಾ. ರಸಗೊಬ್ಬರಗಳ ದರ ಮಾತ್ರ ಡಬಲ್ ಆಗಿದೆ. ಸೂಲಿಬೆಲೆ ಅವರು ಸುಳ್ಳು ಪರಿವಾರದವರು ನೀರಲ್ಲಿ ಬೆಂಕಿ ಹಚ್ಚೋ ಕೆಲಸ ಮಾಡುತ್ತಾರೆ. ವಿದೇಶಗಳಲ್ಲಿ ಇಟ್ಟಿರೋ ಹಣವನ್ನು ದೇಶದ ಎಲ್ಲಾ ರಸ್ತೆಗಳಿಗೆ ಬಂಗಾರದ ತಡಗು ಹಾಕಿದರು ಇನ್ನೂ ಹಣ ಉಳಿಯುತ್ತದೆ ಎನ್ನುತ್ತಿದ್ದರು. ಚಕ್ರವರ್ತಿ ಸೂಲಿಬೆಲೆ ಈ ರೀತಿ ಸುಳ್ಳು ಹೇಳುತ್ತಿದ್ದರು. ಎಲ್ಲರ ಅಕೌಂಟಿಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳುತ್ತಿದ್ದರೂ ಆದರೆ ಹಣ ಹಾಕಿದರಾ ಎಂದು ಪ್ರಶ್ನಿಸಿದರು.

ಸತೀಶ್ ಜಾರಕಿಹೊಳಿ ಅವರು ತಮ್ಮ ಮಗಳನ್ನು ತಾವಾಗೆ ಚುನಾವಣೆ ಗೆ ನಿಲ್ಲಿಸಿಲ್ಲ. ನಮ್ಮಲ್ಲರ ಒತ್ತಾಯದ ಮೇರೆಗೆ ತಮ್ಮ ಮಗಳನ್ನು ನಿಲ್ಲಿಸಿದ್ದಾರೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಅವರನ್ನು ಗೆಲ್ಲಿಸೋಣ ಎಂದ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಶಾಸಕ ರಾಜು ಕಾಗೆ ಮಾತನಾಡಿ, ನಾವು ಯಾವುದೇ ಸುಳ್ಳು ಆಶ್ವಾಸನೆ ನೀಡುತ್ತಿಲ್ಲ. ನಾವು ಮಾಡಿದ ಅಭಿವೃದ್ಧಿ ಕೆಲಸ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ಬಸವೇಶ್ವರ ಎತ ನೀರಾವರಿ ಯೋಜಗೆ ಸಿಎಂ ಸಿದ್ದರಾಮಯ್ಯನವರ ಚಾಲನೆ ನೀಡಿದ್ದರು. ಜುಲೈ ತಿಂಗಳಲ್ಲಿ ಇನ್ನಷ್ಟು ಅನುದಾನ ನೀಡಿ ಈ ಯೋಜನೆಗಳನ್ನು ಪೂರ್ವಗೊಳಿಸುತ್ತೇವೆ ಎಂದ ಅವರು, ನಮ್ಮ ಭಾಗಕ್ಕೆ ಆಸರೆಯಾದ ಕೃಷ್ಣಾ ನದಿ ಬತ್ತಿ ಹೋಗಿದೆ. ಆದ್ದರಿಂದ ಮಹಾರಾಷ್ಟ್ರ ರಾಜ್ಯದಿಂದ ನೀರನ್ನು ತರುವ ಕೆಲಸ ಮಾಡಬೇಕೆಂದು ಸಿಎಂ ಅವರಿಗೆ ಮನವಿ ಮಾಡಿದರು.

ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ್ ಮಾತನಾಡಿ, ಸ್ವಾತಂತ್ರ್ಯದ ನಂತರ 2014ರವರೆಗಿನ 67 ವರ್ಷಗಳಲ್ಲಿ ದೇಶದ ಒಟ್ಟು ಸಾಲವು 55 ಲಕ್ಷ ಕೋಟಿ ರೂ. ಇತ್ತು. ಆದರೆ, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅದನ್ನು 205 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಿದೆ. ಈ ಮೂಲಕ ಮೋದಿ ಸರ್ಕಾರ ಸುಮಾರು 157 ಲಕ್ಷ ಕೋಟಿ ಸಾಲ ಮಾಡಿದೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ, ಮಾಜಿ ಸಚಿವರಾದ ವೀರಕುಮಾರ ಪಾಟೀಲ್, ಎ.ಬಿ.ಪಾಟೀಲ್, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಗಣೇಶ್ ಹುಕ್ಕೇರಿ, ಮಹೇಂದ್ರ ತಮ್ಮನ್ನವರ್, ಮಾಜಿ ಶಾಸಕರಾದ ಕಾಕಾ ಸಾಹೇಬ್ ಪಾಟೀಲ್, ಶ್ಯಾಮ್ ಘಾಟಗೆ, ಮೋಹನ್ ಶಾ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನಿರ್ಮಲಾ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಸದಾಶಿವ ಬೂಟಾಳಿ, ಸಿದ್ಧಾರ್ಥ್ ಸಿಂಗೆ, ಶ್ಯಾಮ್ ಪೂಜಾರಿ, ದಿಗ್ವಿಜಯ ಪವಾರ್ ದೇಸಾಯಿ, ಅನಂತಕುಮಾರ ಬ್ಯಾಕೋಡ, ರಮೇಶ್ ಸಿಂದಗಿ, ಅರ್ಜುನ ನಾಯಕವಾಡಿ, ಸಂಜು ಬಾನೆ ಸರ್ಕಾರ, ಎನ್ ಸಿಪಿ ಮುಖಂಡ ಉತ್ತಮ ಪಾಟೀಲ್, ಅಶೋಕ ಮಗದುಮ್, ಮಹಾವೀರ ಮೋಹಿತೆ ಸೇರಿದಂತೆ ನೂರಾರು ಮುಖಂಡರು ವೇದಿಕೆ ಮೇಲಿದ್ದರು. ಅಪಾರ ಸಂಖ್ಯೆಯ ಸಾರ್ವಜನಿಕರು ಸೇರಿದ್ದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *