Breaking News
Home / Breaking News / ಸಿಎಂ ಕೃಷಿ ಸಾಲ ವಸೂಲಿ ಬೇಡ ಅಂದ್ರು,ಸಚಿವರು ವಸೂಲಾತಿಯತ್ತ ಗಮನಹರಿಸಿ ಅಂದ್ರು…!!!

ಸಿಎಂ ಕೃಷಿ ಸಾಲ ವಸೂಲಿ ಬೇಡ ಅಂದ್ರು,ಸಚಿವರು ವಸೂಲಾತಿಯತ್ತ ಗಮನಹರಿಸಿ ಅಂದ್ರು…!!!

ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಇತ್ತೀಚಿಗೆ ಮಳೆ ಹಾನಿ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ಮಾಡಿ ರೈತರಿಂದ ಒತ್ತಾಯಪೂರ್ವಕವಾಗಿ ರೈತರಿಂದ ಸಾಲ ವಸೂಲಾತಿ ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ ಬೆನ್ನಲ್ಲಿಯೇ ಸೋಮವಾರ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ,ಬೆಳಗಾವಿ ಪ್ರಾಂತ್ಯದ ಪ್ರಗತಿ ಪರಶೀಲನೆ ಮಾಡಿದ ಸಹಕಾರ ಸಚಿವ ರಾಜಣ್ಣ ಅವರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲವನ್ನು ವಿತರಿಸಿ,ಜೊತೆಗೆ ವಸೂಲಾತಿಯತ್ತ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಮನ ಹರಿಸಬೇಕು.ಎಂದು ತಾಕೀತು ಮಾಡಿದ್ದಾರೆ.ಹೀಗಾಗಿ ಅಧಿಕಾರಿಗಳು ಸಿಎಂ ಆದೇಶ ಪಾಲಿಸಬೇಕೋ ಅಥವಾ ಸಚಿವರ ಮಾತು ಕೇಳಬೇಕೋ ಎನ್ನುವ ಗೊಂದಲ ಸೃಷ್ಠಿಯಾಗಿದೆ.

ಬೆಳಗಾವಿ:

ಕೃಷಿ ಸಾಲ ವಿತರಣೆಗೆ ಒತ್ತು ನೀಡಿ:

ಸಾಲ ವಿತರಣೆ ಹಾಗೂ ವಸೂಲಾತಿಯತ್ತ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಮನ ಹರಿಸಬೇಕು. ಸಾರ್ವಜನಿಕರು ಸಾಕಷ್ಟು ಠೇವಣಿಗಳನ್ನು ಇರಿಸಿದ್ದಾರೆ. ಸಾರ್ವಜನಿಕರ ನಂಬಿಕೆಗೆ ಚ್ಯುತಿ ಬರದಂತೆ ಸಿಬ್ಬಂದಿಗಳು ಕೆಲಸ ಮಾಡಬೇಕು.

ಎಸ್.ಸಿ.ಎಸ್. ಟಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಸಣ್ಣ ರೈತರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಹೆಚ್ಚಿನ ಕೃಷಿ ಸಾಲ ನೀಡಬೇಕು.
ಕೇವಲ ಹೆಚ್ಚು ಜಾಮೀನು ಹೊಂದಿದ ರೈತರಿಗೆ ಸಾಲ ನೀಡುವುದು ಮಾತ್ರವಲ್ಲದೇ ಸಣ್ಣ ಜಾಮೀನು ಹೊಂದಿದ ರೈತರಿಗೂ ಕೂಡ ಕೃಷಿ ಒದಗಿಸುವತ್ತ ಅಧಿಕಾರಿ ಸಿಬ್ಬಂದಿಗಳು ಆದ್ಯತೆ ನೀಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಲಹೆ ನೀಡಿದರು.

ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ, ಪಿಕೆಪಿಎಸ್, ಡಿಸಿಸಿ ಬ್ಯಾಂಕ್, ಅರ್ಬನ್ ಸೊಸೈಟಿಗಳಲ್ಲಿ ಹಣ ಕಬಳಿಸಿ, ದುರುಪಯೋಗಪಡಿಸಿಕೊಂಡು ಸಂಸ್ಥೆಗಳಿಗೆ ವಂಚನೆ ಎಸಗುವವರ ವಿರುದ್ಧ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಇಲಾಖೆ ಸಚಿವರಾದ ಕೆ.ಎನ್ ರಾಜಣ್ಣ ಅವರು ಸೂಚನೆ ನೀಡಿದರು.

ಸುವರ್ಣ ವಿಧಾನ ಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ಸೋಮವಾರ (ಜು.31) ನಡೆದ ಬೆಳಗಾವಿ ಪ್ರಾಂತ್ಯದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಗಳ ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ಹಣ ದುರುಪಯೋಗ ಪ್ರಕರಣಗಳು ಗಣನೀಯವಾಗಿ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಕಳೆದ 3-4 ವರ್ಷಗಳಿಂದ ಬಾಕಿಯಿರುವ ವಂಚನೆ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ನ್ಯಾಯಾಲಯ ಹಂತಗಳಲ್ಲಿರುವ ಪ್ರಕರಣಗಳ ಕೋರ್ಟ್ ನಿಗದಿ ದಿನಾಂಕಕ್ಕೆ ಅಧಿಕಾರಿಗಳು ತಪ್ಪದೆ ಹಾಜರಿರಬೇಕು ಎಂದು ಸೂಚಿಸಿದರು

ಪ್ರತಿ ಸಭೆಯಲ್ಲಿ ಸರಿಯಾದ ಮಾಹಿತಿ ಒದಗಿಸುತ್ತಿಲ್ಲ, ಈ ಹಿಂದಿನ ಮಾಹಿತಿಯನ್ನು ಪರಿಶೀಲಿಸಿದಾಗ ಸಾಕಷ್ಟು ಮಾಹಿತಿಗಳು ಹೊಂದಾಣಿಕೆ ತಪ್ಪುತ್ತಿವೆ. ಅಧಿಕಾರಿಗಳು ಸಮರ್ಪಕ ಮಾಹಿತಿ ಜೊತೆಗೆ ಸಭೆಗಳಿಗೆ ಹಾಜರಾಗಬೇಕು ಎಂದು ತಿಳಿಸಿದರು.

ಪಿಗ್ಮಿ ಕಲೆಕ್ಷನ್ ಸಾಫ್ಟ್ ವೇರ್ ದುರ್ಬಳಕೆ:

ಠೇವಣಿ ಏಜೆಂಟ್ ಗಳಿಂದ ಪಿಗ್ಮಿ ಕಲೆಕ್ಷನ್ ಗಳಲ್ಲಿ ಈಗಾಗಲೇ ಅನೇಕ ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಸಾಫ್ಟ್‌ವೇರ್‌ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹಣ ದುರ್ಬಳಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಉತ್ತರ ಕನ್ನಡ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ ಕೆಲವು ಹಣ ದುರುಪಯೋಗ ವಂಚನೆ ಪ್ರಕರಣಗಳು ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗಳಲಾಗಿದೆ. ಪ್ರಕರಣಗಳು ಸಿಬಿಐ ಹಂತದಲ್ಲಿ ತನಿಖೆ ನಡೆಯುತ್ತಿವೆ ಎಂದು ಸಂಬಂಧಿಸಿದ ಅಧಿಕಾರಿಗಳು ವಿವರಿಸಿದರು.

ಸಹಕಾರ ಸಂಘಗಳ ನಿಬಂಧಕರು ಡಾ. ಕೆ. ರಾಜೇಂದ್ರ,
ಸಹಕಾರ ಸಂಘಗಳ ಅಪರ ನಿಬಂಧಕರು ಕೆ. ಎಮ್. ಆಶಾ, ಸಹಕಾರ ಸಂಘಗಳ ಅಪರ ನಿಬಂಧಕರು ಪ್ರಕಾಶ ರಾವ್ ಬೆಳಗಾವಿ ಜಂಟಿ ನಿಬಂಧಕರಾದ ಸುರೇಶ ಗೌಡ, ಸಹಕಾರ ಇಲಾಖೆ ಸಿಬ್ಬಂದಿ, ಡಿಸಿಸಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರು ಸೇರಿದಂತೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***

Check Also

ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲ…!

ಚಿಕ್ಕೋಡಿ- ಚಿಕ್ಕೋಡಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ NCP ಅಭ್ಯರ್ಥಿ ಉತ್ತಮ್ …

Leave a Reply

Your email address will not be published. Required fields are marked *