Breaking News

34 ವರ್ಷದ ಹಿಂದೆ ಬಡಾಲ ಅಂಕಲಗಿಯಲ್ಲಿ ಮತ್ತೊಂದು ದುರಂತ ನಡೆದಿತ್ತು…!!

ಬಡಾಲ ಅಂಕಲಗಿ:34ವರ್ಷಗಳ
ಹಿಂದೆ ಈ ಗ್ರಾಮ ಬೇರೊಂದು
ದುರಂತದಿಂದಾಗಿ ರಾಜ್ಯ ಮಟ್ಟದಲ್ಲಿ
ಸುದ್ದಿಯಾಗಿತ್ತು:ಒಂದೇ
ಕುಟುಂಬದ ಹನ್ನೊಂದು
ಜನರನ್ನು ಸಜೀವವಾಗಿ ದಹಿಸಲಾಗಿತ್ತು!

ಮನೆಯೊಂದು ಕುಸಿದು ಒಂದೇ
ಕುಟುಂಬದ ಆರು ಜನರು ದಾರುಣವಾಗಿ
ಸಾವನ್ನಪ್ಪಿದ ಘಟನೆ ಬೆಳಗಾವಿ
ತಾಲೂಕಿನ ಬಡಾಲ ಅಂಕಲಗಿ ಗ್ರಾಮವು
ಈಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ
ಗಮನ ಸೆಳೆದ ಈ ಗ್ರಾಮದ ದುರ್ಘಟನೆ
ಕಂಡು ಮರಗದವರಿಲ್ಲ.
34ವರ್ಷಗಳ ಹಿಂದೆ 1987 ರ
ಜನೇವರಿಯಲ್ಲಿ ಇದೇ ಗ್ರಾಮದಲ್ಲಿ
ನಡೆದ ನರಮೇಧದಿಂದಾಗಿ ಬಡಾಲ
ಅಂಕಲಗಿ ರಾಜ್ಯದ ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗಿತ್ತು.
ಈ ಗ್ರಾಮದ ಎರಡು ಕುಟುಂಬಗಳ ನಡುವಣ ದ್ವೇಷದ ದಳ್ಳುರಿಗೆ ಒಂದೇ
ಕುಟುಂಬದ 11 ಜನರು ಜೀವಂತವಾಗಿಯೇ
ದಹಿಸಲ್ಪಟ್ಟಿದ್ದರು.ಈ ಭೀಭತ್ಸ ಘಟನೆ
ನಡೆದ ಸ್ವಲ್ಪ ಹೊತ್ತಿನಲ್ಲಿಯೇ ನಾನು
ಪತ್ರಕರ್ತನಾಗಿ ಅಲ್ಲಿಗೆ ಧಾವಿಸಿದ್ದೆ!
ಬೆಳಗಾವಿಯ ಕಪೀಲ ಚಿತ್ರ
ಮಂದಿರದಲ್ಲಿ ಮುಂಜಾನೆ ಎಂಟಕ್ಕೆ ವಾರ್ತಾ ಇಲಾಖೆಯ ವತಿಯಿಂದ ಒಂದು
ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಬೆಳಗಾವಿಯ ಎಲ್ಲ
ಪತ್ರಕರ್ತರೂ ಅಲ್ಲಿಯೇ ಇದ್ದರು.ಆಗ
ಸುದ್ದಿ ವಾಹಿನಿಗಳಂತೂ ಇರಲೇ ಇಲ್ಲ.
ನಾಡೋಜ ದಿನಪತ್ರಿಕೆ ಸಂಪಾದಕ
ದಿ. ರಾಘವೇಂದ್ರ ಜೋಶಿ ಮತ್ತು
ನನಗೆ ಸುದ್ದಿ ಹೇಗೊ ಗೊತ್ತಾಯಿತು.ಮೆಲ್ಲನೇ ನಾವಿಬ್ಬರೂ ಅಲ್ಲಿಂದ ಯಾರಿಗೂ
ತಿಳಿಸದೇ ಹೊರಗೆ ಬಂದೆವು.ಅವರ
1331 ನಂಬರಿನ ಸ್ಕೂಟರ್ ಮೇಲೆ
ಬಡಾಲ ಅಂಕಲಗಿಗೆ ಹೋದೆವು.
ಅಲ್ಲಿಯ ಎರಡು ಬೇರೆ ಬೇರೆ
ಸಮಾಜಗಳಿಗೆ ಸೇರಿದ ಎರಡು ಕುಟುಂಬಗಳ ಮಧ್ಯೆ ದೀರ್ಘ ಕಾಲದಿಂದ ದ್ವೇಷ
ಹೊಗೆಯಾಡುತ್ತಿತ್ತು.ಒಂದು ಕುಟುಂಬ
ಇನ್ನೊಂದು ಕುಟುಂಬದ ಮನೆಯ
ಹಿಂದಿನ ಮತ್ತು ಮುಂದಿನ
ಬಾಗಿಲುಗಳನ್ನು ಹೊರಗಿನಿಂದ ರಾತ್ರಿ
ಹೊತ್ತು ಚಿಲಕ ಹಾಕಿ ಬೆಂಕಿ
ಹಚ್ಚಿತು.ಒಳಗಿದ್ದವರು ಹೊರಗೆ
ಬರದಂತೆ ನೋಡಿಕೊಳ್ಳಲಾಯಿತು.
ಒಳಗಿದ್ದ 11ಜನರು ಜೀವಂತವಾಗಿ
ಸುಟ್ಟು ಕರಕಲಾದರು.ಒಬ್ಬ
ಮಹಿಳೆ ಮತ್ತು ಆಕೆಯ ಮಗು ಹೇಗೋ
ಪಾರಾದರು.ರಾತ್ರಿ ಬೆಳದಿಂಗಳಲ್ಲಿ ಆಕೆ ಅಲ್ಲಿಂದ ಓಡಿ ಬಾಗೇವಾಡಿ ಠಾಣೆಯಲ್ಲಿ ಆಶ್ರಯ ಪಡೆದಳು.
ನಾವು ಸ್ಥಳಕ್ಕೆ ಹೋದಾಗ
ಸುಟ್ಟು ಕರಕಲಾದ 11 ದೇಹಗಳು
ಬಿದ್ದಿದ್ದವು.ಅವುಗಳ ಮಧ್ಯೆ ನಿಂತು
ನನ್ನ ಕ್ಯಾಮೆರಾದಲ್ಲಿ ಫೋಟೊ ತೆಗೆದೆ.ಆ
ನಂತರ ಅವುಗಳ ಸಾಮೂಹಿಕ ಅಂತ್ಯಕ್ರಿಯೆ ನಡೆಯಿತು.ಕೆಲಹೊತ್ತಿನ ನಂತರ ಬೆಳಗಾವಿಯಿಂದ ಪತ್ರಕರ್ತರು
ಧಾವಿಸಿ ಬಂದರು.ಅವರಿಗೆ ಸುಟ್ಟು
ಕರಕಲಾದ ದೇಹಗಳನ್ನು ನೋಡಲು
ಸಿಗಲಿಲ್ಲ.ನಾನು ಸೀದಾ ಬಾಗೇವಾಡಿ
ಠಾಣೆಗೆ ಹೋದೆ.ಅಲ್ಲಿ ಆ ಮಹಿಳೆ
ಮೂಲೆಯಲ್ಲಿ ಕುಳಿತಿದ್ದಳು.ಚಂದ್ರವ್ವ
ಹೆಸರಿನ ಆಕೆ ದುರಂತದ ಕಾರಣಗಳನ್ನು
ಎಳೆ ಎಳೆಯಾಗಿ ನನಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಳು.
ದ್ವೇಷದ ದಳ್ಳುರಿಯಿಂದ ಪಾರಾದ
ಆಕೆಯ ಪುತ್ರ ಈಗ ಬೇರೊಂದು
ಗ್ರಾಮದಲ್ಲಿದ್ದಾನಂತೆ.ಮೊಬೈಲ್ ಹಾಗೂ
ಸುದ್ದಿ ವಾಹಿನಿಗಳೇ ಇರದ ಕಾಲದಲ್ಲಿ
ನಮಗೆ ಸ್ಕೂಪ್ ಸ್ಟೋರಿ ಮಾಡುವದೆಂದರೆ
ಒಂದು ರೀತಿ ಥ್ರಿಲ್ಲಿಂಗ್ ಎನಿಸುತ್ತಿತ್ತು.
ಅದೇ ಬಡಾಲ ಅಂಕಲಗಿ
ಈಗ ಮತ್ತೊಂದು ಕಾರಣಕ್ಕಾಗಿ
ಸುದ್ದಿಯಲ್ಲಿದೆ.
ಅಶೋಕ ಚಂದರಗಿ
ಹಿರಿಯ ಪತ್ರಕರ್ತರು
ಬೆಳಗಾವಿ

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.