Breaking News
Home / Breaking News / ಮುಂದಿನ ವರ್ಷ ಸರ್ಕಾರಿ ನೌಕರರ ವೇತನ ಸಮಿತಿ ರಚನೆ — ಮುಖ್ಯಮಂತ್ರಿ

ಮುಂದಿನ ವರ್ಷ ಸರ್ಕಾರಿ ನೌಕರರ ವೇತನ ಸಮಿತಿ ರಚನೆ — ಮುಖ್ಯಮಂತ್ರಿ

ಬೆಳಗಾವಿ,- ಸರ್ಕಾರಿ ನೌಕರರ ವೇತನ ವೇತನ ಸಮಿತಿಯನ್ನು ಮುಂದಿನ ವರ್ಷ ರಚಿಸಲಾಗುವುದು. ಈ ಕುರಿತಂತೆ 2017ರ ಬಜೇಟ್‍ನಲ್ಲಿ ಘೋಷಣೆ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ತಿನಲ್ಲಿಂದು ಹೇಳಿದರು.
ಸದಸ್ಯ ರಾಮಚಂದ್ರಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು ರಾಜ್ಯದಲ್ಲಿ 1966 ರಿಂದ 2016ರವರೆಗೆ ಐದು ವೇತನ ಆಯೋಗಗಳು ಹಾಗೂ ಎರಡು ವೇತನ ಸಮಿತಿಗಳನ್ನು ರಚಿಸಲಾಗಿದೆ. ಕಾಲಕಾಲಕ್ಕೆ ನೌಕರರ ವೇತನ ತಾರತಮ್ಯವನ್ನು ಸರಿದೂಗಿಸಲು ಕ್ರಮ ವಹಿಸಲಾಗಿದೆ. ಕೇಂದ್ರ ಸರ್ಕಾರದ ವೇತನಕ್ಕೆ ಸರಿಸಮಾನವಾಗಿ ರಾಜ್ಯ ಸರ್ಕಾರ ವೇತನ ನೀಡಲು ಸಾಧ್ಯವಾಗುವುದಿಲ್ಲ. ಆದರೆ ವೇತನ ಸಮಿತಿಯ ಮೂಲಕ ಈ ಅಂತರವನ್ನು ಕಡಿಮೆ ಮಾಡಲು ಸಮಿತಿಗೆ ಸೂಚನೆ ನೀಡಲಾಗುವುದೆಂದು ಹೇಳಿದರು.
ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರಕ್ಕೆ ಅವರದೇ ಆದ ನಿಯಮಾವಳಿಗಳಿವೆ. ಕೇಂದ್ರ ಸರ್ಕಾರ ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸುತ್ತದೆ. ಆದರೆ ರಾಜ್ಯ ಸರ್ಕಾರ ಪ್ರತಿ 6 ರಿಂದ 7ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 5 ವೇತನ ಆಯೋಗ ರಚಿಸಿದೆ ಹಾಗೂ ಎರಡು ವೇತನ ಸಮಿತಿಯನ್ನು ರಚಿಸಿದೆ. 2011ರಲ್ಲಿ ರಚಿಸಿದ ವೇತನ ಸಮಿತಿಯ ಶಿಫಾರಸ್ಸನ್ನು 2012ರಲ್ಲಿ ಜಾರಿಗೊಳಿಸಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀಕಂಠೇಗೌಡ, ಕೆ.ಬಿ. ಶಾಣಪ್ಪ, ಚೌಡರೆಡ್ಡಿ, ಬಸವರಾಜ ಹೊರಟ್ಟಿ, ಶರವಣ ಪುಟ್ಟಣಯ್ಯ, ಅರುಣ ಶಹಾಪುರ, ಗಣೇಶ ಕಾರ್ನಿಕ್ ಇತರರು ಈ ಕುರಿತಂತೆ ಮಾತನಾಡಿ, ರಾಜ್ಯದಲ್ಲಿ ಶೇ. 35 ರಷ್ಟು ಹುದ್ದೆಗಳು ಕೊರತೆಯಲ್ಲಿವೆ. ರಾಜ್ಯ ಸರ್ಕಾರಿ ನೌಕರರಿಗೆ ಕಾರ್ಯಾಭಾರದ ಒತ್ತಡ ಹೆಚ್ಚಾಗಿದೆ. ಕೇಂದ್ರ ಸರ್ಕಾರಿ ನೌಕರರಂತೆ ಕೆಲಸ ಮಾಡುವಾಗ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಮಾನದಂಡದಲ್ಲಿ ರಾಜ್ಯ ಸರ್ಕಾರ ಕೇಂದ್ರದ ನೌಕರರಿಗೆ ಕೇಂದ್ರದ ಮಾದರಿಯಲ್ಲಿ ವೇತನ ನೀಡಿ ಎಂದು ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ನೌಕರರ ವೇತನ ವಿಚಾರದಲ್ಲಿ ಶೇ. 100 ರಷ್ಟು ಅಂತರವಿದೆ. ಇದನ್ನು ಕಡಿತಗೊಳಿಸಿ, ಬೆಳೆಗಳ ಹೆಚ್ಚಳದಿಂದ ಸರ್ಕಾರಿ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ. ತಮ್ಮಷ್ಟೇ ಕೆಲಸ ಮಾಡುವ ಕೇಂದ್ರ ಸರ್ಕಾರಿ ನೌಕರರು ತಮಗಿಂತ ಹೆಚ್ಚು ವೇತನ ಪಡೆಯುವುದು ಸಹಜವಾಗಿ ರಾಜ್ಯ ಸರ್ಕಾರಿ ನೌಕರರಲ್ಲಿ ಒಂದು ರೀತಿಯಲ್ಲಿ ಅಸಮಾಧಾನ ಉಂಟು ಮಾಡಿದೆ. ಮೈಸೂರಿನಲ್ಲಿ ತಾವು ಘೋಷಿಸಿದಂತೆ ವೇತನ ಆಯೋಗವನ್ನು ರಚಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಸರಿಪಡಿಸುವುದು. ಸರ್ಕಾರಿ ನೌಕರರ ಮೇಲಿರುವ ಕಾರ್ಯ ಒತ್ತಡ, ಹುದ್ದೆಗಳ ಕೊರತೆ ಸೇರಿದಂತೆ ಸದನದ ಗಮನ ಸೆಳೆದು ಪ್ರಸಕ್ತ ಸಂದರ್ಭದಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡುವ ಅನಿವಾರ್ಯದ ಕುರಿತಂತೆ ಎಳೆ ಎಳೆಯಾಗಿ ಮುಖ್ಯಮಂತ್ರಿಗಳಿಗೆ ವಿವರಿಸಿದರು.

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *