Breaking News
Home / Breaking News / ಬೆಳಗಾವಿಯಲ್ಲಿ ಸಾವಿತ್ರಿಬಾಯಿ ಪುಲೆ ..ಚಿತ್ರದ ಅಲೆ ..ಪ್ರತಿಯೊಬ್ಬರೂ ನೋಡಲೇ ಬೇಕು ಈ ಚಿತ್ರದಲ್ಲಿರುವ ಕಲೆ…,!!!!

ಬೆಳಗಾವಿಯಲ್ಲಿ ಸಾವಿತ್ರಿಬಾಯಿ ಪುಲೆ ..ಚಿತ್ರದ ಅಲೆ ..ಪ್ರತಿಯೊಬ್ಬರೂ ನೋಡಲೇ ಬೇಕು ಈ ಚಿತ್ರದಲ್ಲಿರುವ ಕಲೆ…,!!!!

ಬೆಳಗಾವಿ:
ಚಲನಚಿತ್ರಗಳು ಸಮಾಜಕ್ಕೆ ದಿಕ್ಸೂಚಿ ಇದ್ದಂತೆ, ಮಾರ್ಗದರ್ಶಿ ಸೂತ್ರದೊಂದಿಗೆ ಸಮಾಹಕ್ಕೆ ಸಂದೇಶ ನೀಡಬೇಕು. ಈ ನಿಟ್ಟಿನಲ್ಲಿ ತುಳಿತಕ್ಕೊಳಗಾದ ವರ್ಗವನ್ನು ಮೇಲೆತ್ತುವ ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಮೇಲೆ ಬೆಳಕು ಚೆಲ್ಲಿರುವುದು ಶ್ಲಾಘನೀಯ ಕಾರ್ಯ ಎಂದು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಹೇಳಿದರು.

ನಗರದ ನಿರ್ಮಲಾ ಚಿತ್ರಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಅವರ ಕೃತಿ ಆಧಾರಿತ ‘ಸಾವಿತ್ರಿಬಾಯಿ ಫುಲೆ’ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಲನಚಿತ್ರಗಳು ಪ್ರಸ್ತುತ ಸಮಾಜದ ಪ್ರತಿಬಿಂಬಗಳು ಎಂದರೆ ತಪ್ಪಾಗಲಾರದು. ಅದೇ ನಿಟ್ಟಿನಲ್ಲಿ ನಮಗೆ ಇತಿಹಾಸದ ವಾಸ್ತವಾಂಶಗಳನ್ನು ತಿಳಿಸಿಕೊಟ್ಟು, ಮಕ್ಕಳಲ್ಲಿನ ಕಲ್ಪನಾ ಶಕ್ತಿಗೆ ಬಣ್ಣತುಂಬುತ್ತವೆ. ಈ ವಿಚಾರದಲ್ಲಿ ಚಲನಚಿತ್ರಗಳಿಂದ ಮಕ್ಕಳಿಗೆ ಹೆಚ್ಚು ಉಪಯೋಗವಾಗಿದೆ. ಅವರ ಅಧ್ಯಯನ, ಭಾವನೆಯ ಬದುಕಿನ ಜತೆಗೆ ಭವಿಷ್ಯತ್ತನ್ನು ರೂಪಿಸಿಕೊಳ್ಳಲು ಇವು ನೆರವಾಗಿವೆ. ಇನ್ನು ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಆಧಾರಿತವಾದ ಈ ಚಿತ್ರ ಪ್ರಸ್ತುತವಾಗಿದೆ, ಇದು ಎಲ್ಲ ಕಾಲಕ್ಕೂ ಸ್ಪೂರ್ತಿದಾಯಕವಾಗಿದೆ. ಹಿಂದುಳಿದ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಮಹಿಳೆಯರ ಶೋಷಣೆ ಮತ್ತು ಅವರನ್ನು ಕತ್ತಲೆ ಕೂಪದಲ್ಲಿ ಇರಿಸುತ್ತಿದ್ದ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಇದೊಂದು ಅರಿವಿನ ಜಾಗೃತಿಯ ಭಾಗ ಎಂದರೆ ತಪ್ಪಾಗಲಾರದು. ಸಮಾಜವನ್ನು ತಿದ್ದುವಲ್ಲಿ, ನಕಾರಾತ್ಮಕ ಅಂಶಗಳನ್ನು ಸಕಾರಾತ್ಮಕವಾಗಿ ರೂಪಿಸಿ, ಜನರಲ್ಲಿ ಅರಿವು ಮೂಡಿಸುವಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ ಎಂದರು.

ಉತ್ತರ ಕರ್ನಾಟಕ ಚಲನಚಿತ್ರ ವಿತರಕರ ಸಂಘದ ಅಧ್ಯಕ್ಷ ಅವಿನಾಶ ಪೋತದಾರ ಮಾತನಾಡಿ, ಮಹಾರಾಷ್ಟ್ರದಲ್ಲಿ ನಡೆದ ಐತಿಹಾಸಿಕ ಘಟನಾವಳಿಗಳನ್ನು ಬೆಳಗಾವಿ, ಪಾರಿಶ್ವಾಡ, ಗೋಕಾಕ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಚಿತ್ರೀಕರಣ ಮಾಡಿ ನೈಜತೆಯ ಜತೆಗೆ ಜನರ ಮುಂದಿಟ್ಟಿದ್ದಾರೆ. ಈ ಭಾಗದ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಎಲ್ಲರೂ ಉತ್ತರ ಕರ್ನಾಟಕ ಭಾಗದವರು ಎಂಬುದು ಇದರ ಹೆಮ್ಮೆ. ಸುಮಾರು ೨೦೦ವರ್ಷಗಳ ಹಿಂದಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಮೂಲಕ ಮನಮುಟ್ಟುವಂತೆ ಚಿತ್ರ ನೀಡಿದ್ದಾರೆ. ತುಳಿತಕ್ಕೊಳಗಾದ ಸಮುದಾಯಗಳ ಬಿಂಬವನ್ನು, ಹೋರಾಟದ ಹಲವು ಮುಖಗಳನ್ನು ಇದರಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಈ ವೇಳೆ ಸಂಸದ ಸುರೇಶ ಅಂಗಡಿ, ಡಾ.ಪ್ರಭಾಕರ ಕೋರೆ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ ಅಭಯ ಪಾಟೀಲ, ಅನಿಲ ಬೆನಕೆ, ಸಾಹಿತಿ ಸರಜೂ ಕಾಟ್ಕರ್, ಚಿತ್ರಕಥೆ-ನಿರ್ದೇಶನ ವಿಶಾಲರಾಜ, ನಿರ್ಮಾಪಕ ಬಸವರಾಜ ಬೂತಾಳಿ, ಸತೀಶ ಕುಲಕರ್ಣಿ, ಚಿತ್ರದ ಪ್ರಮುಖ ಕೇಂದ್ರಬಿಂದು ಸುಚೇಂದ್ರ ಪ್ರಸಾದ ಸೇರಿದಂತೆ ಹಲವರು ಇದ್ದರು.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *