Breaking News
Home / Breaking News / ಕಾವೇರಿಯ ಸಮಾಧಿಯ ಮೇಲೆ ಕಣ್ಣೀರು ಸುರಿಸಿದ ಪ್ರೀತಿಯ ನಾಯಿ..!

ಕಾವೇರಿಯ ಸಮಾಧಿಯ ಮೇಲೆ ಕಣ್ಣೀರು ಸುರಿಸಿದ ಪ್ರೀತಿಯ ನಾಯಿ..!

ಕಾವೇರಿ ಅಗಲಿಕೆಗೆ ವೇದನೆಪಟ್ಟ ಪ್ರೀತಿಯ ನಾಯಿ

ಬೆಳಗಾವಿ-
ಕೊಳವೆಬಾವಿಯಲ್ಲಿ ಕಾಲುಜಾರಿ ಬಿದ್ದು ಬಾರದ ಲೋಕಕ್ಕೆ ತೆರಳಿದ ಆರು ವರ್ಷದ ಕಾವೇರಿಯ ದುರಂತ ಘಟನೆಗೆ ದುಃಖಿಸದವರು ಯಾರೂ ಇಲ್ಲ. ಮಮತೆಯಿಂದ ಬೆಳೆಸಿದ ತಂದೆ ತಾಯಿ ಬಂದುಗಳು ಆಕ್ರಂದನ ಇಡೀ ನಾಡವೇ ಗಮನಿಸಿದೆ. ದುರಂತಕ್ಕೆ ಮನುಷ್ಯತ್ವವೇ ಮರುಗಿದೆ. ಮುಗ್ಧೆ, ಮಮತೆಯ ಹೃದಯುಳ್ಳ ಕಾವೇರಿಯ ದುರಂತಕ್ಕೆ ಕೇವಲ ಮನುಷ್ಯರು ಮಾತ್ರವಲ್ಲ ಆಕೆ ಸಾಕಿದ ಪ್ರೀತಿಯ ನಾಯಿಯೂ ಕೂಡ ಕಾವೇರಿಯ ಸಮಾಧಿಯ ಮೇಲೆ  ಕಣ್ಣೀರು ಇಟ್ಟು, ತೀವ್ರ ವೇದನೆ ಅನುಭವಿಸಿದ ಸನ್ನಿವೇಶ ಎಲ್ಲರ ಮನ ಕರಗಿಸಿ, ನೀರಾಗಿಸಿದೆ. ಪ್ರೀತಿ, ಮಮತೆ, ವಾತ್ಸಲ್ಯದಂಥ ಪದಗಳನ್ನು ಬಳಸಿ ಮನುಷ್ಯ ತನ್ನ ಭಾವತೀವ್ರತೆಯನ್ನು, ವೇದನೆಯನ್ನು ಪ್ರಕಟಿಸಬಲ್ಲ. ಆದರೆ, ಇದಾವ ಶಬ್ಧಗಳ ಅರಿವಿಲ್ಲದ ಕಾವೇರಿಯ ಮಮತೆಯ ನಾಯಿ ಕುಂಯಿಗುಡುತ್ತ ತನ್ನ ಪ್ರೀತಿಯ ಕಾವೇರಿಯನ್ನು ಕಳೆದುಕೊಂಡು ತೀವ್ರದುಃಖದಿಂದ ಸಮಾಧಿಯ ಸುತ್ತ ಚಡಪಡಿಸುವುದರ ಮೂಲಕ ಮಾನವೀಯತೆ ಅನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಕಟ್ಟಿಕೊಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ನಾಯಿಯ ತಳಮಳಕ್ಕೆ ಕಂಡವರು ಇಂದು ಕಣ್ಣೀರಿಟ್ಟಿದ್ದಾರೆ.

ಬಡವರ ಮನೆಯ ಪ್ರೀತಿಯ ಮಗಳಾದ ಕಾವೇರಿಯಲ್ಲಿ ಎಂಥ ಮಮತೆಯ ಭಾವ, ವಾತ್ಸಲ್ಯದ ಹೃದಯ ಇತ್ತು ಎಂಬುದಕ್ಕೆ ಈ ಸನ್ನಿವೇಶ ಸಾಕ್ಷಿ ಒದಗಿಸುತ್ತದೆ. ಇಂಥ ಕಾವೇರಿ ನಮ್ಮೆಲ್ಲರ ಮಗಳು ಎಂದು ಎಲ್ಲರೂ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕಾವೇರಿ ಮನೆಯಲ್ಲಿ ಬಡತಮನ ಮೈಮುರಿದುಕೊಂಡು ಬಿದ್ದಿದ್ದರೂ ಮಮತೆಯ ಶ್ರೀಮಂತಿಗೇನೂ ಕೊರತೆಯಿರಲಿಲ್ಲ. ತಾನು ತಿನ್ನವ ರೊಟ್ಟಿ ಒಂದೇ ಇದ್ದರೂ ಕಾವೇರಿ ಅದರಲ್ಲಿಯ ಅರ್ಧರೊಟ್ಟಿ ತನ್ನ ಪ್ರೀತಿಯ ನಾಯಿಗೆ ನೀಡಿ ನೋಡಿಕೊಂಡವಳು. ಅಂಗಡಿಯಿಂದ ಚಾಕಲೇಟ್ ತಂದರೂ ಅದರಲ್ಲಿ ನಾಯಿಗೂ ಒಂದಿಷ್ಟು ಕೊಡದೆ ಕಾವೇರಿ ಅದನ್ನು ತಿಂದವಳಲ್ಲ. ಆಕೆಯ ಕೈತುತ್ತು ತಿಂದು ಮಮತೆಯ ಮಡಿನಲ್ಲಿ ಬೆಳೆದ ನಾಯಿ, ಎಂದು ಕಾವೇರಿಯನ್ನು ಬಿಟ್ಟು ಅಗಲಿದ್ದಲ್ಲ.  ಅಂದು ಮಾತ್ರ ತಾಯಿ ಉರವಲಗೆಂದು ಹೊಲಕ್ಕೆ ತೆರಳಿದಾಗ ಆಕೆಯೊಂದಿಗೆ ಕಾವೇರಿಯೂ ಹೋದಾಳು ಎಂಬ ಅರಿವಿಲ್ಲದ ನಾಯಿ ಎಲ್ಲೋ ಹೊರಗಡೆ ತೆರಳಿತ್ತು. ಕಾವೇರಿಗೆ ಸಾವು ಕೊಳವೆಬಾವಿಯಲ್ಲಿ ಹೊಂಚುಹಾಕಿ ಕುಳಿತಿತ್ತು.

ತನ್ನ ಪ್ರೀತಿಯ ಕಾವೇರಿ ಇಲ್ಲದಕ್ಕೆ ನಾಯಿ ಆಕೆಯನ್ನು ಹುಡುಕಾಡಿದೆ. ಮಂಗಳವಾರ ರಾತ್ರಿ ಕಾವೇರಿಯ ಮೃತದೇಹವನ್ನು  ಮನೆಗೆ  ತಂದಾಗ, ಮನೆಯವರು ಆಕ್ರಂದನ ಪಡುವಾಗ ಅರಿವಿಗೆ ಬಂದಿದೆ- ತನ್ನ ಮಮತೆಯ ಜೀವಕ್ಕೆ ಏನೋ ಆಗಿದೆ ಎಂದು.  ಅಂದು ರಾತ್ರಿ ಅಲ್ಲಿಯೇ ಇದ್ದು ಎಲ್ಲವನ್ನು ಗಮನಿಸದ ಅದು ತನ್ನ ಮಮತೆಯ ಜೀವವನ್ನು ಮಣ್ಣು ಮಾಡಿದಾಗ ಇನ್ನಷ್ಟು ತಳಮಳಿಸಿದೆ. ಇಂದು ಮುಂಜಾನೆಯಿಂದ ಶವ ಸಂಸ್ಕಾರ ಮಾಡಿದ ಸಮಾಧಿಯ ಸುತ್ತ ಒಂದೇ ಸವನೆ ವೇದನೆಯಿಂದ ಚಡಪಡಿಸುತ್ತ ಕಾವೇರಿಗಾಗಿ ಸುತ್ತಾಡಿದೆ. ನಿನ್ನ ಕಾವೇರಿ ಇನ್ನಿಲ್ಲ ಎಂದು ತಳಮಳದಿಂದಲೇ ಜನರು ನಾಯಿಯನ್ನು ಸಮಾಧಿಯಿಂದ ಕದಲಿಸಲು ಪ್ರಯತ್ನಿಸಿದರೂ ಅಲ್ಲಿ ಹೋಗದ ಅದು ಮರುಕಪಟ್ಟಿದೆ.  ನಾಯಿಯ ಕರುಣಾಭಾವ, ಋಣಭಾವವನ್ನು ಕಂಡವರೆಲ್ಲರೂ ಕಣ್ಣೀರಿಟ್ಟಿದ್ದಾರೆ.

ಸಾಕು ಪ್ರಾಣಿಯಾದ ನಾಯಿ ಮೊದಲಿನಿಂದಲೂ ನಾಯಿ ಮನುಷ್ಯನ ಸಂಗಾತಿಯಾಗಿ ಉಳಿದುಕೊಂಡು ಬಂದಿದೆ. ಸಾಕಿದ ಒಡೆಯನಿಗೆ ಜೀವತೇಯ್ದ ಘಟನೆಗಳು ನಡೆದ ಬಗ್ಗೆ ಇತಿಹಾಸದ ಪುಟಗಳಲ್ಲಿ ಆತ್ಕುರ ಶಾಸನದ ಅಕ್ಷರಗಳು ಸಾಕ್ಷಿ ನುಡಿಯುತ್ತವೆ. ನಾಯಿ ಮನುಷ್ಯನ ವಿಶ್ವಾಸಿ ಎನ್ನುವುದಕ್ಕೆ ಕುವೆಂಪು ಅವರ ಮಲೆಗಳಲ್ಲಿ ಮದುಮಗಳ ಕಾದಂಬರಿಯಲ್ಲಿ ಬರುವ ಗುತ್ತಿ ಎಂಬ ಪಾತ್ರ ತನ್ನ ಪ್ರೀತಿಯ ನಾಯಿಯ ಕಾರಣದಿಂದಾಗಿ ನಾಯಿಗುತ್ತಿ ಎಂದೇ ಹೆಸರು ಪಡೆದವನು. ಈಗ ಕಾವೇರಿ ಸಾಕಿದ ನಾಯಿ, ನಾಯಿಯ ಮಮತೆಯ ಪರಂಪರೆಗೆ ಸಾಕ್ಷಿ ನುಡಿದಿದೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *