Breaking News
Home / Breaking News / ಸತೀಶ ಜಾರಕಿಹೊಳಿ ಪ್ರಭಾವಿ ನಾಯಕ – ಸಿಎಂ

ಸತೀಶ ಜಾರಕಿಹೊಳಿ ಪ್ರಭಾವಿ ನಾಯಕ – ಸಿಎಂ

ಬೆಳಗಾವಿ- ಕ್ಷೇತ್ರದ ಅಭಿವೃದ್ಧಿಗೆ 50 ಸಾವಿರ ಕೋಟಿಗೂ ಅಧಿಕ ಖರ್ಚು ಮಾಡಿ ದಾಖಲೆ ನಿರ್ಮಿಸಿದ್ದೇವೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು

ಯಮಕನಮರಡಿ ಗ್ರಾಮದ ಸಿಇಎಸ್ ಹೈಸ್ಕೂಲ್ ಮೈದಾನದಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ರೂ. 7403.63 ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಕೇಳುವ ವಿರೋಧ ಪಕ್ಷ ಮುಖಂಡರು ಸದನದಲ್ಲಿ ನಾನು ಉತ್ತರ ನೀಡುವಾಗ ಯಾವ ಮುಖಂಡರು ಇರಲಿಲ್ಲ.
ಒಂದು ವೇಳೆ ಸರ್ಕಾರದ ಸಾಧನೆಯ ಅಂಕಿ-ಅಂಶಗಳು ಸುಳ್ಳಾಗಿದ್ದರೆ ಯಾವುದೇ ವೇದಿಕೆಯಲ್ಲಿ ನಮ್ಮನ್ನು ಪ್ರಶ್ನಿಸಲಿ ಬಹಿರಂಗ ಚರ್ಚೆಗೆ ಸಿದ್ಧ ಎಂದು ಮುಖ್ಯಮಂತ್ರಿಗಳು ಸವಾಲು ಹಾಕಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡುವಂತೆ ಪ್ರಧಾನಮಂತ್ರಿಗಳ ಬಳಿ ಸರ್ವಪಕ್ಷದ ನಿಯೋಗ ಕರೆದೊಯ್ದು ಗೋಗರೆದರೆ ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ.
ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದರು. ಅದೇ ರೀತಿ ಈಗ ಯಾಕೆ ಸಾಧ್ಯವಾಗಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಸರ್ಕಾರದ ಕೃಷಿಭಾಗ್ಯ, ಅನಿಲ, ಅನ್ನಭಾಗ್ಯ ಆರೋಗ್ಯ, ವಿದ್ಯಾಸಿರಿ, ಕ್ಷೀರಭಾಗ್ಯ, ಕ್ಷೀರಧಾರೆ, ರೈತರ ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಆದ್ಯತೆ ನೀಡಿದೆ.
ಇಡೀ ರಾಜ್ಯದ ಇತಿಹಾಸದಲ್ಲಿ ನುಡಿದಂತೆ ನಡೆದ ಸರ್ಕಾರ ನಮ್ಮದು ಎಂಬುದನ್ನು ಎದೆತಟ್ಟಿ ಹೇಳುತ್ತೇನೆ ಎಂದರು.

ಹಾಡಿ, ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅವರಿಗೆ ವಾಸಿಸುವನೇ ಒಡೆಯ ಎಂದು ಘೋಷಣೆ ಮಾಡಿದ್ದು ನಾವು ಎಂದರು
ಸತೀಶ ಸೂಕ್ಷ್ಮ ಮನಸ್ಸಿನ ರಾಜಕಾರಣಿ:

ಸತೀಶ ಜಾರಕಿಹೊಳಿ ಅವರು ಇಡೀ ರಾಜ್ಯದಲ್ಲಿ ಪ್ರಭಾವಿ ರಾಜಕಾರಣಿ. ಅವರ ಶಕ್ತಿ ಏನು ಎಂಬುದರ ಅರಿವು ನನಗಿದೆ.

ಮೂಢನಂಬಿಕೆ- ಕಂದಾಚಾರದ ವಿರುದ್ಧ ಸತೀಶ ಜಾರಕಿಹೊಳಿ ಅವರಿಗೆ ಸ್ಪಷ್ಟತೆ ಇದೆ. ವೈಚಾರಿಕತೆ ಇರುವರಿಗೆ ಮಾತ್ರ ಸ್ಪಷ್ಟತೆ ಸಾಧ್ಯ. ಅವರು ವೈಚಾರಿಕತೆ ಹೊಂದಿರುವ ಸೂಕ್ಷ್ಮ ಮನಸ್ಸಿನ ರಾಜಕಾರಣಿ. ಸೌಮ್ಯ ಸ್ವಭಾವದ ಪ್ರಭಾವಿ ರಾಜಕಾರಣಿ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು.
ತುಳಿತಕ್ಕೆ ಒಳಗಾದ ಜನರಿಗೆ ಸಂವಿಧಾನಾತ್ಮಕ ನ್ಯಾಯ ಒದಗಿಸುವುದು ಸತೀಶ ಜಾರಕಿಹೊಳಿ ಅವರ ಹೋರಾಟವಾಗಿದೆ ಎಂದರು.
ರಾಜ್ಯದಲ್ಲಿ ಕೆಲವರು ಸಾಮರಸ್ಯ ಹಾಳುಗೆಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಅಭಿವೃದ್ಧಿ ಪರವಾಗಿರುವ ಜನರಲ್ಲ.
ನಾವು ಹಿಂದುತ್ವ, ಇಸ್ಲಾಂ, ಕ್ರೈಸ್ತರು, ಜೈನರ ವಿರೋಧಿಗಳಲ್ಲ. ನಾವು ಬಹುತೇಕರು ಹಿಂದೂಗಳು.
ನಾವು ಟಿಪ್ಪು ಮಾತ್ರವಲ್ಲ; ಅಂಬೇಡ್ಕರ್, ಬಸವಣ್ಣ, ಕನಕ, ವಾಲ್ಮೀಕಿ, ಭಗೀರಥ, ರಾಣಿ ಚನ್ನಮ್ಮ, ಅಂಬಿಗರ ಚೌಡಯ್ಯ ಹೀಗೆ ಎಲ್ಲ ಮಹನೀಯರ ಜಯಂತಿ ಮಾಡ್ತೇವಿ.
ಸಾಧು-ಸಂತರು, ಸೂಫಿಗಳ ಜಯಂತಿಯನ್ನು ಸರ್ಕಾರ ಮಾಡುತ್ತದೆ. ಕೃಷ್ಣ ಜಯಂತಿ, ಚನ್ನಮ್ಮ ಜಯಂತಿ ಆಚರಣೆ ಆರಂಭಿಸಿದ್ದು, ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಟ್ಟಿದ್ದು ನಾವು. ಬಸವ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಆದೇಶಿಸಿದ್ದು, ನಾವು ಇನ್ನೊಬ್ಬರಿಂದ ದೇಶಪ್ರೇಮ ಅಥವಾ ಇತಿಹಾಸ ತಿಳಿಯುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಲು ಟಿಪ್ಪು ಜಯಂತಿ ವಿರೋಧಿಸುವುದು ಚರಿತ್ರೆಗೆ ಮಾಡುತ್ತಿರುವ ಅವಮಾನ ಎಂದು ಹೇಳಿದರು.

ನಾನು ಕನ್ನಡ ನಾಡಿನ ಮಗ:

ಕರ್ನಾಟಕದ ಮಣ್ಣಿನ ಮಗನಾದ ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಂದ ನಮ್ಮ ನಾಡಿನ ಇತಿಹಾಸದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.
ಕರ್ನಾಟಕವನ್ನು ಬರಮುಕ್ತಗೊಳಿಸುವ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕುತ್ತಿದ್ದೇವೆ ಎಂದರು.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *