Breaking News
Home / LOCAL NEWS / ಬಲಾಡ್ಯರ ದೌರ್ಜನ್ಯ ತಡೆಯಲು. ಮೀಸಲಾತಿ ಹಕ್ಕು ಪಡೆಯಲು ಎಲ್ಲರೂ ಒಗ್ಗೂಡಲಿ…ಶಂಕರ ಮುನವಳ್ಳಿ

ಬಲಾಡ್ಯರ ದೌರ್ಜನ್ಯ ತಡೆಯಲು. ಮೀಸಲಾತಿ ಹಕ್ಕು ಪಡೆಯಲು ಎಲ್ಲರೂ ಒಗ್ಗೂಡಲಿ…ಶಂಕರ ಮುನವಳ್ಳಿ

ಬೆಳಗಾವಿ: ಸಂವಿಧಾನ ಸಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಪರಿನಿರ್ವಾಣ ದಿನಾಚರಣೆಯನ್ನು ನಗರದ ಅಂಬೇಡ್ಕರ ಉದ್ಯಾನವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದ ಗುರುಗಳು ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದ ಆರಂಭದಲ್ಲಿ ಬೌದ್ಧ ದರ್ಮಗುರುಗಳಿಂದ ಬುದ್ಧ ಮಂತ್ರ ಹಾಗೂ ಭೀಮ ಮಂತ್ರವನ್ನು ಜಫಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಮುಖಂಡ ಮಲ್ಲೇಶ ಚೌಗಲೆ, ದಲಿತ ಸಮಾಜ ಒಗ್ಗಟ್ಟಾಗಬೇಕು. ಸಮಾಜ ಸಂಘಟನೆಯಾದರೆ ಮಾತ್ರ ಸಮಾಜ ಬೆಳೆಯಲು ಸಾಧ್ಯ. ದಲಿ ತ ಸಮಾಜವನ್ನು ಬೇರೆ ಬೇರೆ ಉಪ ಸಮುದಾಯಗಳಾಗಿ ವಿಭಜನೆಯಾಗುತ್ತಿವೆ. ಎಡ, ಬಲ, ಮಧ್ಯ ಎನ್ನದೇ ಎಲ್ಲರು ಒಗ್ಗಟ್ಟಾಗಿ ಸಮಾಜದ ಒಳಿತಗಾಗಿ ಹೋರಾಟ ಮಾಡುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೊ.ಭೀಮಾ ಶಂಕರ, ಬಿ.ಆರ್.ಅಂಬೇಡ್ಕರ ಅವರು, ವಿಶ್ವಚಿಂತಕರು ಹಾಗೂ ವಿಶ್ವಗುರುಗಳಾಗಿದ್ದು, ಅವರ ವಿಚಾರಧಾರೆಗಳು ಪಾಲಿಸಿ ಚಾರಿತ್ರಿಕ ಸಮಾಜ ನಿರ್ಮಾಣ ಮಾಡಲು ಎಲ್ಲರು ಕೈ ಜೋಡಿಸಬೇಕು. ಯುವಕರು ಮತ್ತು ಮಹಿಳೆಯರು ಸಮಾಜದ ಒಳಿತಿಗಾಗಿ ನಡೆಯುವ ಪ್ರತಿಯೊಂದು ಹೋರಾಟದಲ್ಲಿ ಪಾಲ್ಗೊಂಡು ಹೋರಾಟಗಳನ್ನು ಯಶಸ್ವಿಗೊಳಿಸಬೇಕು. ಸಮಾಜದಲ್ಲಿ ತಾಂಡವಾಡುತ್ತಿರುವ ಅಂಧ ಶ್ರದ್ಧೆ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಮಾಜದ ಮುಖ್ಯವಾಹಿನಿಗೆ ಬರುವುದರ ಮೂÀಲಕ ಅಂಬೇಡ್ಕರ ಕನಸು ನನಸು ಮಾಡಬೇಕೆಂದು ಕರೆ ನೀಡಿದರು.
ದಲಿತ ಸಮಾಜದ ಹಿರಿಯ ಮುಖಂಡ ಅಶೋಕ ಐನಾವರ ಮಾತನಾಡಿ, ದಲಿತ ಸಮಾಜ ವಿವಿಧ ಸಂಘನೆಗಳಾಗಿ ಛಿದ್ರವಾಗುತ್ತಿದೆ. ಬಾಬಾಸಾಹೇಬರನ್ನು ಕಳೆದುಕೊಂಡ ಈ ದಿನ ಸಮಾಜವನ್ನು ಒಗ್ಗೂಡಿಸುವ ಸಂಕಲ್ಪ ಮಾಡಬೇಕು. ಎಲ್ಲ ದಲಿತಪರ ಸಂಘಟನೆಗಳು ಒಂದಾಗಿ ಸಮುದಾಯದ ಶಕ್ತಿಯನ್ನು ವೃದ್ಧಿಸಿದರೆ ಮಾತ್ರ ಸಮುದಾಯಕ್ಕೆ ನ್ಯಾಯ ಸಿಗಲು ಸಾಧ್ಯ. ತಾಯಂದಿಯರು ತಮ್ಮ ಮಕ್ಕಳಿಗೆ ಶಿಕ್ಷಣನೀಡುವುದರ ಮೂಲಕ ದಲಿತ ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಯಂದಿರಗಳಲ್ಲಿ ಕೈ ಮುಗಿದು ಮನವಿ ಮಾಡಿಕೊಂಡರು.
ಕೆಪಿಸಿಸಿ ಮಾಜಿ ಸದಸ್ಯ ಹಾಗೂ ದಲಿತ ಸಮಾಜದ ಮುಖಂಡ ಶಂಕರ ಮುನವಳ್ಳಿ ಮಾತನಾಡಿ, ಸಮಾಜ ಒಗ್ಗೂಡದಿದ್ದರೆ ನಮಗೆ ಸಿಗಬೇಕಾದ ಮೀಸಲಾತಿ ಸಿಗುವುದಿಲ್ಲ. ಬಲಾಡ್ಯರ ಕಪಿಮುಷ್ಠಿಯಲ್ಲಿ ನಾವು ಗುಲಾಮರಾಗಿಯೆ ಉಳಿಯಬೇಕಾಗುತ್ತದೆ. ದಲಿತ ಸಮಾಜ ತ್ವರಿತಗತಿಯಲ್ಲಿ ಸಂಘಟಿತರಾಗಬೇಕು. ಮುಖಂಡರು ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಕೂಡಲೆ ಚಾಲನೆ ನೀಡಬೇಕು. ಸಮಾಜವನ್ನು ಬಲಾಡ್ಯ ಹಾಗೂ ತೋಳ್ಬಲ ಹೊಂದಿದ ವರ್ಗದ ಕಪಿಮುಷ್ಠಿಯಿಂದ ಮುಕ್ತಗೊಳಿಸಿದರೇ ಮಾತ್ರ ದಲಿತ ಸಮಾಜದ ಬೆಳವಣಿಗೆ ಸಾಧ್ಯ ಎಂದರು.
ಪ್ರತಿಯೊಂದು ರಾಜಕೀಯ ಪಕ್ಷ ಚುನಾವಣೆ ಸಂದರ್ಭದಲ್ಲಿ ದಲಿತ ಸಮಾಜವನ್ನು ದುರುಪಯೋಗ ಪಡಿಸಿಕೊಂಡಿವೆ. ಯಾವ ರಾಜಕೀಯ ಪಕ್ಷದಿಂದಲೂ ಸಮಾಜದ ಅಭಿವೃದ್ದಿ ಸಾಧ್ಯವಾಗಿಲ್ಲ. ಅದಕ್ಕಾಗಿ ಎಲ್ಲರು ಒಟ್ಟಾಗಿ ಧ್ವನಿ ಎತ್ತಿದಲ್ಲಿ ಯಾವ ರಾಜಕೀಯ ಪಕ್ಷವನ್ನಾದರೂ ಬಗ್ಗಿಸಬಹುದಾಗಿದೆ. ಸಮಾಜದ ಬೆಳವಣಿಗೆಗೆಗ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಸರ್ಕಾರಗಳಿಂದ ಪಡೆಯಲು ಸಾಧ್ಯ. ದಲಿತ ಏಕತಾ ಪರಿಷತ್ ಮೂಲಕ ಸಮಾಜದ ನಾಯಕರು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇಡೀ ಸಮಾಜ ಒಗ್ಗೂಡುವ ಸಂಕಲ್ಪ ಇಂದೇ ಆಗಬೇಕು ಎಂದು ಮನವಿ ಮಾಡಿಕೊಂಡರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಮಶಾನದಲ್ಲಿ ಬಿ.ಆರ್.ಅಂಬೇಡ್ಕರ ಅವರ ಪರಿನಿರ್ವಾಣ ದಿನವನ್ನು ಆಚರಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸಿಹಿ ಹಂಚಬೇಡಿ ಎಂದು ಮನವಿ ಮಾಡಿಕೊಂಡಿದ್ದೆ ಮೂಡನಂಭಿಕೆ ವಿರುದ್ಧದ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬಾಬಾಸಾಹೇಬರ ಭಾವಚಿತ್ರವನ್ನು ಸ್ಮಶಾನದಲ್ಲಿಟ್ಟು ಶವಗಳ ಎದುರು ಸಿಹಿ ಊಟ ಬಡಿಸುವ ಕಾರ್ಯಕ್ರಮಕ್ಕೆ ಮಾತ್ರ ನಮ್ಮ ವಿರೋಧವಿದೆ ಎಂದು ಶಂಕರ ಮುನವಳ್ಳಿ ಹೇಳಿದರು.
ಕಾರ್ಯಕ್ರಮದಲ್ಲಿ ಬುದ್ಧಬಂತೆ ವಿಮಲ ಕೀರ್ತಿಜಿ, ಆನಂದ ಜಿ, ಪ್ರೊ. ಕೆ.ಡಿ.ಮಂತ್ರೆಸಿ, ಪ್ರೊ.ಬಾವುರಾವ ದೊಡಮಣಿ, ಬಾಬಾಸಾಹೇಬ್ ಕಾಂಬಳೆ, ಎಚ್.ಡಿ.ಮಾಗಡಿ, ಬಿಜಾಪುರೆ, ಕಲ್ಲಪ್ಪ ರಾಮಚಣ್ಣವರ, ಮಹೇಂದ್ರ ದೊಡಮಣಿ, ಆನಂದ ಕೋಲಕಾರ, ಸಂತೋಷ ಕಾಂಬಳೆ, ರವಿ ಬಸ್ತವಾಡಕರ, ಅನೀಲ ಕಾಂಬಳೆ, ದೀಪಕ ಭೋಸಲೆ, ಪರಶುರಾಮ ವಗ್ಗಣ್ಣವರ ಸೇರಿದಂತೆ ನೂರಾರರು ಜನ ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *